ರಾಷ್ಟ್ರೀಯ

ರಾಯ್‌ಬರೇಲಿಯಲ್ಲಿ ಭಿಕ್ಷುಕನಾಗಿದ್ದ ತಮಿಳುನಾಡಿನ ಕೋಟ್ಯಧಿಪತಿ ಉದ್ಯಮಿ

Pinterest LinkedIn Tumblr


ಹೊಸದಿಲ್ಲಿ: ಆಧಾರ್‌ ಕಾರ್ಡ್‌ ಬೇಕೋ ಬೇಡವೋ ಎಂಬ ವಾದ ಪ್ರತಿವಾದಗಳು, ಕಾನೂನು ಹೋರಾಟಗಳು ನಡೆಯುತ್ತಲೇ ಇವೆ.

ಆದರೆ ಆಧಾರ್‌ ಕಾರ್ಡ್‌ನಿಂದ ವ್ಯಕ್ತಿಯೊಬ್ಬರು ತಮ್ಮ ಮನೆಯವರನ್ನು ಸೇರಿಕೊಳ್ಳಲು ನೆರವಾಗಿದೆ. ಇದರ ಕಥೆ ಹೀಗಿದೆ.

ರಾಯ್‌ ಬರೇಲಿಯ ಆಶ್ರಮವೊಂದರ ಬಳಿ ಇಳಿ ವಯಸ್ಸಿನ ಭಿಕ್ಷುಕರೊಬ್ಬರು ಆಹಾರಕ್ಕಾಗಿ ಅರಸುತ್ತಿದ್ದರು. ಇವರ ಪರಿಸ್ಥಿತಿ ಕಂಡು ಮರುಗಿದ ಆಶ್ರಮದ ಸ್ವಾಮೀಜಿ ಇವರನ್ನು ಕರೆದುಕೊಂಡು ಹೋದರು.

ಇವರಿಗೆ ಆಹಾರ ನೀಡಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದರು. ನಂತರ ಸ್ವಾಮೀಜಿ ಭಾಸ್ಕರ್‌ ಅವರು ಈ ಭಿಕ್ಷುಕನಿಗೆ ಸ್ನಾನ ಮಾಡಿಸುವಂತೆ ತನ್ನ ಶಿಷ್ಯರಿಗೆ ತಿಳಿಸಿದರು.

ಇವರು ಸ್ನಾನ ಮಾಡಿಸಲು ಶಿಷ್ಯರು ಮುಂದಾದಾಗ ಭಿಕ್ಷುಕನ ಬಟ್ಟೆಯ ಒಳಗೆ ಆಧಾರ್‌ ಕಾರ್ಡ್‌ ಹಾಗೂ ಕೋಟಿ ರೂಪಾಯಿ ಮೌಲ್ಯದ ಫಿಕ್ಸಡ್‌ ಡಿಪಾಸಿಟ್‌ ದಾಖಲೆಗಳು ಸಿಕ್ಕಿವೆ.

ಕೂಡಲೇ ಶಿಷ್ಯರು ತಮ್ಮ ಗುರುಗಳಿಗೆ ಮಾಹಿತಿ ನೀಡಿದ್ದಾರೆ. ಭಾಸ್ಕರ್‌ ಕೂಡಲೇ ಬಂದು ಈ ವ್ಯಕ್ತಿಯನ್ನು ವಿಚಾರಿಸಿದಾಗ ಅಸ್ಪಷ್ಟ ಮಾಹಿತಿ ದೊರೆಯಿತು. ಆಧಾರ್ ಕಾರ್ಡ್‌ನಲ್ಲಿ ದೊರೆತ ಮಾಹಿತಿ ಮೇರೆಗೆ ಭಾಸ್ಕರ್‌ ಅವರು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಿದರು.

ಆಗ ಈ ಇಳಿ ವಯಸ್ಸಿನ ವ್ಯಕ್ತಿ ತಮಿಳುನಾಡಿನ ಕೋಟ್ಯಧಿಪತಿ ಮುತ್ತಯ್ಯ ನಾಡರ್ ಎಂಬುದಾಗಿ ತಿಳಿದುಬಂತು. ನಂತರ ನಾಡರ್‌ ಅವರ ಪುತ್ರಿ ಗೀತಾ ತಮಿಳುನಾಡಿನಿಂದ ರಾಯ್‌ಬರೇಲಿಗೆ ಆಗಮಿಸಿ ತಂದೆಯನ್ನು ಕರೆದೊಯ್ದರು.

ನಂತರ ನವಭಾರತ್‌ ಟೈಮ್ಸ್‌ ಜತೆ ಮಾತನಾಡಿದ ಭಾಸ್ಕರ್‌ ಉದ್ಯಮಿಯ ಬಳಿ ಇದ್ದ ಆಧಾರ್‌ ಕಾರ್ಡ್‌ನಿಂದ ಮಾಹಿತಿ ಪಡೆಯುವಂತಾಯಿತು ಎಂದರು.

Comments are closed.