ರಾಷ್ಟ್ರೀಯ

ಹಾರ್ದಿಕ್ ಪಟೇಲ್ ವಿರುದ್ಧದ ಜಾಮೀನು ರಹಿತ ವಾರಂಟ್ ರದ್ದುಗೊಳಿಸಿದ ಗುಜರಾತ್ ಕೋರ್ಟ್

Pinterest LinkedIn Tumblr


ಮೆಹನ್ಸಾ: ಪಾಟೀದಾರ್ ಮೀಸಲಾತಿ ಹೋರಾಟದ ಮುಖಂಡ ಹಾರ್ದಿಕ್ ಪಟೇಲ್ ವಿರುದ್ಧ ಹೊರಡಿಸಿದ್ದ ಜಾಮೀನು ರಹಿತ ಬಂಧನದ ವಾರಂಟ್ ಅನ್ನು ವಿಸ್ನಾಗರ್ ಸೆಷನ್ ಕೋರ್ಟ್ ರದ್ದುಗೊಳಿಸಿದೆ.

ದಾಂಧಲೆ ಪ್ರಕರಣವೊಂದರ ಸಂಬಂಧ ಹಾರ್ಧಿಕ್ ಪಟೇಲ್ ಮತ್ತು ಆತನ ಆರು ಸಹಚರರು ಇಂದು ನ್ಯಾಯಾಲಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಹಾಗೂ ಮುಂದಿನ ಎಲ್ಲಾ ವಿಚಾರಣೆಗಳಿಗೂ ಕಡ್ಡಾಯವಾಗಿ ಹಾಜರಾಗುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರಂಟ್ ರದ್ದುಗೊಳಿಸಿದೆ.

ಬಿಜೆಪಿ ಶಾಸಕರ ಕಚೇರಿಯಲ್ಲಿ ನಡೆಸಿದ ದಾಂಧಲೆ ಪ್ರಕರಣ ಸಂಬಂಧ ಹಾರ್ದಿಕ್ ಪಟೇಲ್ ವಿರುದ್ಧ ಸೆಷನ್ಸ್ ಜಡ್ಜ್ ಎ.ಪಿ ಅಗರ್ ವಾಲ್ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿದ್ದರು.

ಇಂದು ಹಾರ್ದಿಕ್ ಪಟೇಲ್ ಮತ್ತು ಆರು ಮಂದಿ ಕೋರ್ಟ್ ಗೆ ಹಾಜರಾಗಿ ಪ್ರತಿಯೊಬ್ಬರು ನ್ಯಾಯಾಲಯಕ್ಕೆ 5 ಸಾವಿರ ರು ಶೂರಿಟಿ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 15ಕ್ಕೆ ಮುಂದೂಡಿದೆ.

2015ರ ಜುಲೈ ನಲ್ಲಿ ನಡೆದ ಪಟೇಲ್ ಸಮುದಾಯದ ಮೀಸಲಾತಿ ಹೋರಾಟದ ವೇಳೆ ವಿಸ್ನಾಗರ್ ಬಿಜೆಪಿ ಶಾಸಕ ರಿಷಿಕೇಶ್ ಪಟೇಲ್ ಅವರ ಕಚೇರಿ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಲಾಗಿತ್ತು.

Comments are closed.