
ಬೆಂಗಳೂರು: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ವಿಭಾಗದ ಪೊಲೀಸರು ನೇಪಾಳ ರಾಜ್ಯದ 6 ಮಂದಿ ಮನೆಗಳ್ಳರೂ ಸೇರಿದಂತೆ 23 ಕಳ್ಳರನ್ನು ಬಂಧಿಸಿ 1.71 ಕೋಟಿ ರೂ. ಮೌಲ್ಯದ ವಜ್ರದ ಆಭರಣ, ಚಿನ್ನ ಹಾಗೂ ಬೆಳ್ಳಿ ಆಭರಣ, ಪುರಾತನ ಕಾಲದ ಶ್ರೀ ಕೃಷ್ಣನ ವಿಗ್ರಹ, ನಗದು, ಅಫೀಮು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜೆ.ಸಿ.ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣವೊಂದನ್ನು ಬೇಧಿಸಿರುವ ಪೊಲೀಸರು ಆರು ಮಂದಿಯನ್ನು ಬಂಧಿಸಿ 1.405 ಗ್ರಾಂ ತೂಕದ ಚಿನ್ನ ಮತ್ತು ವಜ್ರಾಭರಣ, 5.27 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಆರ್ಎಂಸಿ ಯಾರ್ಡ್ ವ್ಯಾಪ್ತಿಯಲ್ಲಿ ನಡೆದಿದ್ದ 10 ಪ್ರಕರಣಗಳನ್ನು ಪತ್ತೆಹಚ್ಚಿರುವ ಪೊಲೀಸರು ಆರು ಮಂದಿಯನ್ನು ಬಂಧಿಸಿ 365 ಗ್ರಾಂ ಚಿನ್ನಾಭರಣ, 2.5 ಕೆಜಿ ಬೆಳ್ಳಿ ಆಭರಣ, 35 ಕೆ.ಜಿ. ತೂಕದ ಪುರಾತನ ಕಾಲದ ಶ್ರೀ ಕೃಷ್ಣನ ವಿಗ್ರಹ, 832 ಗ್ರಾಂ ಅಫೀಮು, ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಒಟ್ಟು 1.15 ಕೋಟಿ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ರಾಜಗೋಪಾಲನಗರ ಪೊಲೀಸರು 12 ಪ್ರಕರಣಗಳನ್ನು ಪತ್ತೆಹಚ್ಚಿ 14 ಮಂದಿ ಕಳ್ಳರನ್ನು ಬಂಧಿಸಿ 620 ಗ್ರಾಂ ಚಿನ್ನಾಭರಣ ಮತ್ತು 5 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರ್ಎಂಸಿಯಾರ್ಡ್: ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮುರುಗೇಶ್(45) ಎಂಬಾತನನ್ನು ಬಂಧಿಸಿ ಏಳು ಪ್ರಕರಣಗಳನ್ನು ಪತ್ತೆಹಚ್ಚಿ 12.50 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಪೇಟೆ ಸರಹದ್ದಿನಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಿದ್ದ ಶ್ರೀರಾಮಪುರದ ಬುಂಡಾರಾಮ್, ಪೆಮ್ಮರಾಮ್ ಮತ್ತು ಬೊಮ್ಮನಹಳ್ಳಿ ಮುನ್ನ ಲಾಲ್ ಎಂಬುವರನ್ನು ಬಂಧಿಸಿ 6 ಲಕ್ಷ ರೂ. ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಗೋಪಾಲನಗರ:
ಮನೆಗಳ್ಳತನ ಮಾಡುತ್ತಿದ್ದ ಮಣಿಕಾಂತ್ ಸಿಂಗ್, ಸರಿತಾ ಸಿಂಗ್, ಅಭಿಷೇಕ್ ಕುಮಾರ್, ಸಂದೀಪ್ ಗುಪ್ತ ಎಂಬುವರನ್ನು ಬಂಧಿಸಿ 16.65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮನೆಯ ಮಾಲೀಕರು ವಿದೇಶಕ್ಕೆ ಹೋಗಿದ್ದ ವೇಳೆ ವೃದ್ದ ಅಜ್ಜಿ ಮನೆಯಲ್ಲಿದ್ದಾಗ, ಬಾಡಿಗೆಗಿದ್ದ ಈ ಆರೋಪಿಗಳು ಚಿನ್ನಾಭರಣ ಕಳ್ಳತನ ಮಾಡಿದ್ದರು. ಓಎಲ್ಕ್ಸ್ ಮೂಲಕ ಲ್ಯಾಪ್ಟಾಪ್ ಮಾರಾಟ ಮಾಡುವವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅದನ್ನು ಕೊಳ್ಳುವ ನೆಪದಲ್ಲಿ ಗಿರಾಕಿಗಳಂತೆ ಮನೆಗೆ ಹೋಗಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮಾರಾಟಕ್ಕಿಟ್ಟಿದ್ದ ಆರು ಲ್ಯಾಪ್ಟಾಪ್ಗಳನ್ನು ದರೋಡೆ ಮಾಡಿದ್ದ ಪವನ್ ಗೌಡ, ಸುನೀಲ, ಪ್ರಶಾಂತ್, ಸುಹಾಸ್, ನಾಗೇಂದ್ರ, ಲೋಕೇಶ್ ಮತ್ತು ಕಿರಣ್ ಎಂಬುವರನ್ನು ಬಂಧಿಸಿ 2.50 ಲಕ್ಷ ರೂ. ಬೆಲೆ ಬಾಳುವ ಐದು ಲ್ಯಾಪ್ಟಾಪ್ ಮತ್ತು ಕೃತ್ಯಕ್ಕೆ ಬಳಸಿದ್ದ ಮೂರು ದ್ವಿಚಕ್ರ ವಾಹನ, ನಾಲ್ಕು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
Comments are closed.