ಉಡುಪಿ: ಜನಸಂಖ್ಯಾ ಸ್ಪೋಟ ಜಾಗತಿಕ ಸಮಸ್ಯೆಯಾಗಿದ್ದು, ಜನಸಂಖ್ಯಾ ಬೆಳವಣಿಗೆಯ ಮೇಲೆ ನಿಗಾ ವಹಿಸಿ; ಜಗತ್ತು ಬದುಕಲು ಸುರಕ್ಷಿತ ತಾಣವಾಗಿಸಬೇಕಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಹೇಳಿದರು.
ಅವರು ಉಡುಪಿಯ ಪ್ರಗತಿಸೌಧದಲ್ಲಿ ಆಯೋಜಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಶು ಜನನ ಪ್ರಮಾಣ ನಿಯಂತ್ರಣ ಇಂದು ಅನಿವಾರ್ಯವಾಗಿದ್ದು, ನಮ್ಮ ಯುವಜನಾಂಗದ ಬಗ್ಗೆ ಹೆಚ್ಚಿನ ಗಮನ ಹರಿಸುವ ಹೊಣೆ ನಮ್ಮ ಮೇಲಿದೆ ಎಂದರು.

ಜನಸಂಖ್ಯಾ ಸಮತೋಲನ ಲಿಂಗಾನುಪಾತ ವ್ಯತ್ಯಯ, ಹೆಣ್ಣು ಭ್ರೂಣ ಹತ್ಯೆ ಮುಂತಾದ ಸಾಮಾಜಿಕ ಪಿಡುಗುಗಳನ್ನು ಶಿಕ್ಷಣ ಹಾಗೂ ಅರಿವು ಕಾರ್ಯಕ್ರಮಗಳ ಮೂಲಕ ನಿಯಂತ್ರಿಸಬೇಕು, ಇದಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚಿನ ನಿಗಾ ವಹಿಸಿ ಕಾರ್ಯೋನ್ಮುಖವಾಗಬೇಕು ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ ಅವರು ವಹಿಸಿದ್ದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪುರುಷೋತ್ತಮ ಅವರು ಕರಪತ್ರ ಬಿಡುಗಡೆ ಮಾಡಿದರು. ಡಿಎಚ್ಒ ಡಾ.ರೋಹಿಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟಿಹೆಚ್ಒ ಡಾ.ನಾಗರತ್ನ ಸ್ವಾಗತಿಸಿದರು, ಡಾ.ಕೃಷ್ಣಾನಂದ ಕಾರ್ಯಕ್ರಮ ನಿರೂಪಿಸಿದರು.
ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಹಾಗೂ ಆಶಾ ಕಾರ್ಯಕರ್ತೆಯರಿಂದ ರಸಪ್ರಶ್ನೆ ಕಾರ್ಯಕ್ರಮ, ಜಾಥಾ ಹಾಗೂ ಕಿರುನಾಟಕ ಕಾರ್ಯಕ್ರಮ ನಡೆಯಿತು.
ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್ ಜಿ. ಆರ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
Comments are closed.