
ರಾಜ್ ಕೋಟ್: ಗೋವನ್ನು ರಾಷ್ಟ್ರಮಾತೆಯನ್ನಾಗಿಸುವಂತೆ ಆಗ್ರಹಿಸಿ ಗೋ ರಕ್ಷಕ ಸಮಿತಿ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆ ವೇಳೆ ಗುಂಪೊಂದು ವಿಷ ಸೇವಿಸಿದ್ದು, ಈ ವೇಳೆ ಓರ್ವ ಕಾರ್ಯಕರ್ತ ಮೃತಪಟ್ಟಿರುವ ಘಟನೆ ರಾಜ್ ಕೋಟ್ ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ಗೋಮಾಂಸಕ್ಕೆ ದೇಶದಾದ್ಯಂತ ನಿಷೇಧ ಹೇರಿ, ಗೋವಿಗೆ ರಾಷ್ಟ್ರಮಾತೆಯ ಗೌರವವನ್ನು ನೀಡುವಂತೆ ಆಗ್ರಹಿಸಿ ಹಲವು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು ಈ ವೇಳೆ ಕೆಲವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಪ್ರತಿಭಟನೆ ವೇಳೆ ಹಲವು ಪೊಲೀಸ್ ಸಿಬ್ಬಂದಿಗಳು ಇದ್ದರೂ ಸಹ ಎಲ್ಲರ ಮಧ್ಯೆಯೇ ಗುಂಪಿನಲ್ಲಿದ್ದ 8 ಮಂದಿ ಕಾರ್ಯಕರ್ತರು ಕೀಟನಾಶಕ ಸೇವಿಸಿದ್ದಾರೆ. ನಂತರ ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆಂದು ಹೇಳಲಾಗುತ್ತಿದೆ. ಇದರಂತೆ ವಿಷ ಸೇವಿಸಿದವರಲ್ಲಿ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ್ದವರನ್ನು ಅಮ್ರಾ ದನಿಧಾರಿಯಾ (28), ಹಿರಾ ಲಾವರಿಯಾ (35), ರಘುವಿರ್ಸಿನ್ಹ್ ಜಡೇಜಾ(27), ದಿನೇಶ್ ಲೋಟಿಯಾ (45), ಕಮ್ಲೇಶ್ ರಬರಿ (39), ವಾಲಾ ಭರ್ವಾದ್ (36), ವಿಜಯ್ ಸಿಂಧವ್ (28), ದೀಪಕ್ ವಘೇಲಾ (30) ಎಂದು ಹೇಳಲಾಗುತ್ತಿದೆ.