ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಿಧಾನಸೌಧದಲ್ಲಿ ಬಜೆಟ್ ಮಂಡಿಸುತ್ತಿದ್ದ ವೇಳೆಯೇ ವಿದ್ಯುತ್ ಕೈಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಂಜಿನಿಯರ್ (ಸಿ.ರಾಮಲಿಂಗಯ್ಯ) ಅವರ ತಲೆದಂಡವಾಗಿದೆ ಎಂದು ಟಿವಿ9 ವರದಿ ಮಾಡಿದೆ.
ಮಧ್ಯಾಹ್ನ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ವೇಳೆ 2 ಬಾರಿ ವಿಧಾನಸೌಧದೊಳಗೆ ಪವರ್ ಕಟ್ ಆಗಿತ್ತು. ಅದಕ್ಕೆ ವಿದ್ಯುತ್ ಕೈಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದರು.
ಬಜೆಟ್ ಮಂಡನೆ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಬಜೆಟ್ ಮಂಡನೆ ವೇಳೆ ವಿದ್ಯುತ್ ಕೈಕೊಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದ್ದರು. ಆದರೆ ಇಂಧನ ಇಲಾಖೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಸಮಜಾಯಿಷಿ ನೀಡಿದ್ದರು.
ಇದೀಗ ಪವರ್ ಕಟ್ ವಿಚಾರದಲ್ಲಿ ಇಂಜಿನಿಯರ್ ಅವರನ್ನು ಅಮಾನತು ಮಾಡುವಂತೆ ಇಂಧನ ಸಚಿವ ಡಿಕೆ ಶಿವಕುಮಾರ್ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.
ವಿಧಾನಸೌಧ ವಿದ್ಯುತ್ ವಿಭಾಗದ ಎಇಇ ಸಿ.ರಾಮಲಿಂಗಯ್ಯ ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಟ್ರಿಪ್ ಆಗಿದ್ದರಿಂದ ವಿದ್ಯುತ್ ಕಡಿತ ಆಗಿರುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿರುವುದಾಗಿ ತಿಳಿದು ಬಂದಿದೆ.
-ಉದಯವಾಣಿ