ಕುಂದಾಪುರ: ತಾಲೂಕಿನ ತಲ್ಲೂರು ಸಮೀಪದ ರಾಜಾಡಿ ಎಂಬಲ್ಲಿರುವ ಶ್ರೀ ರಕ್ತೇಶ್ವರೀ ದೇವಸ್ಥಾನಕ್ಕೆ ತಡರಾತ್ರಿ ಕನ್ನ ಹಾಕಿದ ಕಳ್ಳರು ಗರ್ಭಗುಡಿ ಒಳಗೆ ದೇವಿಯ ವಿಗ್ರಹಕ್ಕೆ ತೊಡಿಸಿದ್ದ ಬೆಳ್ಳಿಯ ಪತಾಕೆಗಳು, ಚಿನ್ನದ ಕರಿಮಣಿ, ನಗದು ಸೇರಿದಂತೆ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿರುವ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
(ಕಳವಾದ 5 ಬೆಳ್ಳಿ ಪತಾಕೆಗಳು {ಫೈಲ್ ಫೋಟೋ})
ತಲ್ಲೂರು ಭಾಗದ ಕಾರಣಿಕ ಕ್ಷೇತ್ರವೆನಿಸಿಕೊಂಡಿರುವ ಶ್ರೀ ರಕ್ತೇಶ್ವರೀ ದೇವಸ್ಥಾನವು ಅಪಾರ ಭಕ್ತ ಸಂಖ್ಯೆಯನ್ನು ಹೊಂದಿದೆ. ಭಾನುವಾರ ತಡರಾತ್ರಿ ವೇಳೆಗೆ ಶ್ರೀ ದೇವಳದ ಮುಖ್ಯಧ್ವಾರದ ಚಿಲಕ ಮುರಿದ ಕಳ್ಳರು ಗರ್ಭಗುಡಿಯ ಚಿಲಕವನ್ನು ಕಬ್ಬಿಣದ ಸಣ್ಣ ಸಲಾಕೆಯ ಮೂಲಕ ಮುರಿದಿದ್ದು ಗರ್ಭಗುಡಿ ಪ್ರವೇಶಿಸಿ ದೇವಿಯ ಮೂರ್ತಿಯ ಮೇಲ್ಭಾಗದಲ್ಲಿದ್ದ ಐದು ಬೆಳ್ಳಿಯ ಪತಾಕೆಗಳು ಹಾಗೂ ಅರ್ಧ ಫವನ್ ಅಂದಾಜು ತೂಕದ ಚಿನ್ನದ ಕರಿಮಣಿ ಸರ ಹಾಗೂ ನಗದನ್ನು ದೋಚಿದ್ದಾರೆ. ಅಲ್ಲದೇ ಸಮೀಪದ ನಂದಿಕೇಶ್ವರ ದೇವಸ್ಥಾನದ ಹುಂಡಿಯನ್ನು ಒಡೆದು ಅದರಲ್ಲಿದ್ದ ಕಾಣಿಕೆ ಹಣವನ್ನು ಕದ್ದಿದ್ದಾರೆ. ಬೆಳಿಗ್ಗೆ ಪೂಜೆಗೆಂದು ಅರ್ಚಕ ಕುಟುಂಬಿಕರು ದೇವಸ್ಥಾನಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಸಿ.ಸಿ. ಟಿವಿ ಇಲ್ಲ: ಕುಂದಾಪುರ ತಾಲೂಕಿನ ಹಲವೆಡೆಯಲ್ಲಿ ಇತ್ತೀಚಿನ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಕೆಲವು ಕಳ್ಳತನ ಪ್ರಕರಣಗಳು ನಡೆದಿದ್ದು ಈ ಬಗ್ಗೆ ದೇವಸ್ಥಾನಗಳು ಮುತುವರ್ಜಿ ವಹಿಸಿ ಸಿ.ಸಿ ಕ್ಯಾಮೆರಾ ಹಗೂ ಅಲರಾಂ ವ್ಯವಸ್ಥೆ ಮಾಡುವಂತೆಯೂ ಪೊಲೀಸ್ ಇಲಾಖೆ ಎಲ್ಲಾ ದೇವಸ್ಥಾನಗಳಿಗೆ ನೋಟಿಸ್ ನೀಡಿತ್ತದರೂ ಕೂಡ ತಲ್ಲೂರು ರಾಜಾಡಿಯ ರಕ್ತೇಶ್ವರೀ ದೇವಸ್ಥಾನಕ್ಕೆ ಮಾತ್ರ ಈವರೆಗೂ ಸಿ.ಸಿ. ಟಿವಿ ಅಳವಡಿಸದಿರುವುದು ಬೇಜವಬ್ದಾರಿ ತೋರಿಸುತ್ತಿದೆ.
ಡಿವೈಎಸ್ಪಿ ಭೇಟಿ: ಘಟನಾ ಸ್ಥಳಕ್ಕೆ ಕುಂದಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಎಸ್ಸೈ ನಾಸೀರ್ ಹುಸೇನ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವು ಭೇಟಿ ನೀಡಿದೆ. ಮೇಲ್ನೋಟಕ್ಕೆ ಇದು ವೃತ್ತ್ತಿಪರ ಕಳ್ಳರ ಕೃತ್ಯವಲ್ಲವೆಂದು ತಿಳಿದುಬರುತ್ತಿದ್ದು ಸ್ಥಳೀಯರ ಕೃತ್ಯವಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿದೆ.
ಇನ್ನು ಕಳ್ಳರು ಚಿಲಕ ಒಡೆಯಲು ಉಪಯೋಗಿಸಿದ ಸಲಾಕೆ, ದೇವಸ್ಥಾನಕ್ಕೆ ಸಂಬಂಧಿಸಿದ ಕೆಂಪು ಬಣ್ಣದ ಬಟ್ಟೆ, ಕತ್ತಿ, ಕಾಣಿಕೆ ಹುಂಡಿಗಳು ದೇವಸ್ಥಾನದ ಆವರಣದಲ್ಲಿಯೇ ಹಿಂಭಾಗದ ಪೊದೆಯೊಂದರ ಸಮೀಪ ದೊರೆತಿದ್ದು ಪೊಲೀಸರು ಇದೆಲ್ಲವನ್ನೂ ವಶಕ್ಕೆ ಪಡೆದಿದ್ದಾರೆ. ಕಳವಾದ ವಸ್ತುಗಳ ಒಟ್ಟು ಮೌಲ್ಯ ನಲವತ್ತು ಸಾವಿರ ಅಂದಾಜು ಎನ್ನಲಾಗಿದ್ದು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವರದಿ, ಚಿತ್ರ-ಯೋಗೀಶ್ ಕುಂಭಾಸಿ





























