ಹರಿಯಾಣ: ದಲಿತ ಕುಟುಂಬಕ್ಕೆ ಸೇರಿದ್ದ ಇಬ್ಬರು ಮಕ್ಕಳು ಸಜೀವ ದಹನವಾದ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ದಲಿತ ಬಾಲಕ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಫರಿದಾಬಾದ್ ನ ಹಳ್ಳಿಯೊಂದರಲ್ಲಿ 15 ವರ್ಷದ ದಲಿತ ಬಾಲಕ ಶವ ನೇಣುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಕನ ಕುಟುಂಬದವರು ಪೊಲೀಸರ ಮೇಲೆ ಆರೋಪ ಮಾಡಿದ್ದು, ಪೊಲೀಸರೇ ಮಗನನ್ನು ಕೊಂದಿದ್ದಾರೆ ಎಂದು ದೂರಿದ್ದಾರೆ.
ಪಾರಿವಾಳ ಕದ್ದ ಆರೋಪದಲ್ಲಿ ಬಾಲಕನನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ, ಆತನಿಗೆ ಚೆನ್ನಾಗಿ ಹೊಡಿದಿದ್ದರು ಎಂದು ಮನೆಯವರು ಆರೋಪ ಮಾಡಿದ್ದಾರೆ. ಅದೂ ಅಲ್ಲದೆ, ಬಾಲಕನನ್ನು ಬಿಡುಗಡೆ ಮಾಡಬೇಕೆಂದರೆ ಪೊಲೀಸರು 10 ಸಾವಿರ ರೂಪಾಯಿ ಕೇಳಿದ್ದರು. ಬಳಿಕ ಈ ಮೊತ್ತ 15 ಸಾವಿರಕ್ಕೆ ಏರಿದ್ದರು. ತೀರ ಬಡವರಾಗಿದ್ದ ದಲಿತ ಕುಟುಂಬದವರು ದುಡ್ಡು ಹೊಂದಿಸಿ ತರುವಷ್ಟರಲ್ಲಿ ಬಾಲಕನ ತಾಯಿಗೆ ನಿಮ್ಮ ಮಗ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದರು. ಆದರೆ, ಬೆಳಗ್ಗೆ ಬಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೋಷಕರು ಪೊಲೀಸರೇ ನಮ್ಮ ಮಗನನ್ನು ಕೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇನ್ನು ರೊಚ್ಚಿಗೆದ್ದಿರುವ ಸಂಬಂಧಿಕರು ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಬಾಲಕನ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಕನ ಕತ್ತಿನ ಸುತ್ತು ಗಾಯದ ಗುರುತುಗಳು ಪತ್ತೆಯಾಗಿದೆ. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
