ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷಶ್ರ ರಾಹುಲ್ ಗಾಂಧಿ, ಮೋದಿ ಅವರನ್ನು ಶೋಕಿವಾಲ ಎಂದು ಕರೆದಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ನಿಮಿತ್ತ ಶೇಖ್ ಪುರ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿದ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಓರ್ವ ಸುಳ್ಳುಗಾರರಾಗಿದ್ದು, ಕೇವಲ ಆಶ್ವಾಸನೆಗಳನ್ನು ನೀಡುತ್ತಲೇ ಜನರನ್ನು ತಮ್ಮತ್ತ ಸೆಳೆಯುಲು ಯತ್ನಿಸುತ್ತಾರೆ. ಆದರೆ ಅವರು ನೀಡಿದ ಯಾವುದೇ ರೀತಿಯ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ. ನರೇಂದ್ರ ಮೋದಿ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಭರ್ಜರಿ ಆಶ್ವಾಸನೆಗಳನ್ನು ನೀಡುತ್ತಾರೆ. ಆದರೆ ಅದಾವುದನ್ನೂ ಅವರು ಈಡೇರಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
15 ಲಕ್ಷ ಎಲ್ಲಿ..?
“ಲೋಕಸಭಾ ಚುನಾವಣೆಗೂ ಮೊದಲು ತಾವು ಅಧಿಕಾರಕ್ಕೆ ಬಂದರೆ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ಡೆಪಾಸಿಟ್ ಮಾಡುವುದಾಗಿ ಮತ್ತು ಈ 15 ಲಕ್ಷ ಭಾರತದಲ್ಲಿ ನಿರುದ್ಯೋಗಿಗಳಾಗಿರುವ ಯುವಕರಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದರು. ಈಗ ಅದರ ಮಾತೇ ಇಲ್ಲ. ನಾನು ಈಗ ಈ ವೇದಿಕೆ ಮೂಲಕವಾಗಿ ಮೋದಿಯವರನ್ನು ಕೇಳುತ್ತಿದ್ದೇನೆ. ಅವರು ಅಧಿಕಾರಕ್ಕೆ ಬಂದು ವರ್ಷವೇ ಆಯಿತು. ದೇಶದ ಯಾವೊಬ್ಬ ಪ್ರಜೆಯ ಬ್ಯಾಂಕ್ ಖಾತೆಗಾದರೂ ನೀವು ಹೇಳಿದ 15 ಲಕ್ಷ ಹಣ ಸಂದಾಯವಾಗಿದೇ ಎಂದು ರಾಹುಲ್ ಪ್ರಶ್ನಿಸಿದರು.
ಶೋಕಿವಾಲಾ ಮೋದಿ..!
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಕುರಿತು ವಾಗ್ದಾಳಿ ಮಾಡಿದ ರಾಹುಲ್, ನರೇಂದ್ರ ಮೋದಿ ಓರ್ವ ಶೋಕಿಲಾಲಾ. ಅವರಿಗೆ ದೇಶದ ರೈತರ, ಬಡವರ ಬಗ್ಗೆ ಚಿಂತೆಯೇ ಇಲ್ಲ. ಅವರಿಗೆ ವಿದೇಶ ಯಾತ್ರೆ ಮಾಡೋದೆ ಮುಖ್ಯವಾಗಿ ಹೋಗಿದೆ. ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ಮೋದಿ 16 ಬಾರಿ ತಮ್ಮ ಬಟ್ಟೆಯನ್ನು ಬದಲಾಯಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ರೈತರಿಗಿಂತ ದೇಶ-ವಿದೇಶದ ಉದ್ಯಮಿಗಳೇ ಹೆಚ್ಚು. ಹೀಗಾಗಿ ದೇಶದ ರೈತರಿಗಿಂತ ಉದ್ಯಮಿಗಳಿಗೆ ಹೆಚ್ಚಿನ ಲಾಭ ಮಾಡಿಕೊಟ್ಟಿದ್ದಾರೆ ಎಂದು ರಾಹುಲ್ ಆರೋಪಿಸಿದರು.