ಲಕ್ನೊ, ಅ.6: ಲಾಠಿಜಾರ್ಜ್ ಹಾಗೂ ವಿಗ್ರಹಗಳನ್ನು ಗಂಗಾನದಿಯಲ್ಲಿ ವಿಸರ್ಜಿಸುವುದಕ್ಕೆ ನಿಷೇಧದ ವಿರುದ್ಧ ಸಾಧುಗಳು ಹಾಗೂ ಹಿಂದೂ ಧಾರ್ಮಿಕ ಗುಂಪುಗಳ ಪ್ರತಿಭಟನೆಯೊಂದರ ವೇಳೆ, ಸೋಮವಾರ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಮಂಗಳವಾರ ವಾರಣಾಸಿಯಲ್ಲಿ ಶಾಲೆ-ಕಾಲೇಜುಗಳು ಹಾಗೂ ಇತರ ಸಂಸ್ಥೆಗಳು ಮುಚ್ಚಿದ್ದವು.‘ಪ್ರತಿಹಾರ್ ಯಾತ್ರೆ’ಯ ವೇಳೆ ಹಿಂಸೆಗೆ ಸಾಕ್ಷಿಯಾದ, ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರದ ಸೋಮವಾರದ ಪರಿಸ್ಥಿತಿಯ ಬಳಿಕ, ಜಿಲ್ಲಾ ದಂಡಾಧಿಕಾರಿ ರಾಜಮಣಿ ಯಾದವ್ ಈ ಆದೇಶ ನೀಡಿದ್ದರು.ಹಿಂಸಾಚಾರದಲ್ಲಿ ಓರ್ವ ಮ್ಯಾಜಿಸ್ಟ್ರೇಟ್ ಹಾಗೂ ಮತ್ತೋರ್ವ ವೃತ್ತಾಧಿಕಾರಿ ಸಹಿತ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಘಟನೆಯಲ್ಲಿ ಒಳಗೊಂಡಿದ್ದ ಆರೋಪದಲ್ಲಿ ಕನಿಷ್ಠ 26 ಮಂದಿಯನ್ನು ಬಂಧಿಸಲಾಗಿದೆ.ಪರಿಸ್ಥಿತಿಯು ಸಾಮಾನ್ಯದತ್ತ ಮರಳಿದ್ದು, ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಸೋಮವಾರ ಮಧ್ಯರಾತ್ರಿ ಹಿಂದೆಗೆಯಲಾಗಿದೆ. ಆದರೆ, ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ ರಜೆ ಸಾರಲಾಗಿದೆಯೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನಾ ರ್ಯಾಲಿಯ ವೇಳೆ ಏಕಾಏಕಿ ಕಲ್ಲು ತೂರಾಟ ನಡೆದು, ರ್ಯಾಲಿಕಾರರು ಆಕ್ರೋಶಿತರಾಗಿ ತಮ್ಮ ರಕ್ಷಣೆಗಿದ್ದ ಪೊಲೀಸ್ ಸಿಬ್ಬಂದಿಯನ್ನು ಗುರಿಯಿರಿಸ ಲಾರಂಭಿಸಿದಾಗ ಹಿಂಸೆ ಸ್ಫೋಟಗೊಂಡಿತ್ತು. ತ್ವರಿತ ಪ್ರಕ್ರಿಯಾ ಪಡೆ (ಆರ್ಎಎಫ್) ಹಾಗೂ ಪ್ರಾಂತೀಯ ಸಶಸ್ತ್ರ ದಳಗಳನ್ನು ವಾರಣಾಸಿಯಲ್ಲಿ ನಿಯೋಜಿಸಲಾಗಿದೆಯೆಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ) ದಲ್ಜೀ ಚೌಧರಿ ಹೇಳಿದ್ದಾರೆ.
ಗಣೇಶ ಚತುರ್ಥಿ ಹಾಗೂ ನವರಾತ್ರಿಯಂತಹ ಹಬ್ಬಗಳ ವೇಳೆ ಪರಂಪರೆಯಂತೆ ವಿಗ್ರಹಗಳನ್ನು ಗಂಗಾ ನದಿಯಲ್ಲಿ ವಿಸರ್ಜಿಸಲು ನಿಷೇಧ ಹೇರಿರುವುದನ್ನು ಹಾಗೂ ಲಾಠಿ ಚಾರ್ಜ್ ಘಟನೆಯನ್ನು ಪ್ರತಿಭಟಿಸಲು ಅನೇಕ ಹಿಂದೂ ಗುಂಪುಗಳು ಸಂಘಟಿಸಿದ್ದ ಮೆರವಣಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭಾಗಹಿಸಿದ್ದರು. 50 ಜನರ ಬಂಧನ
ವಾರಣಾಸಿ,ಅ.6: ಸೋಮವಾರ ಇಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 50 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಡೀ ನಗರದಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಗಂಗಾನದಿಯಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆಯನ್ನು ಪೊಲೀಸರು ನಿಷೇಧಿಸಿರುವುದನ್ನು ವಿರೋಧಿಸಿ ಸಾಧುಸಂತರು ಮತ್ತು ಸ್ಥಳೀಯ ನಾಯಕರು ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತಿದ್ದಾಗ ಹಿಂಸಾಚಾರ ಭುಗಿಲೆದ್ದಿತ್ತು.