ಮಂಗಳೂರು,ಜುಲೈ.22 : ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಪಣಂಬೂರಿನ ಎನ್ಎಂಪಿಟಿ ಕ್ರೀಡಾಂಗಣದಲ್ಲಿ ಡಿಸೆಂಬರ್ 15ರಿಂದ27ರವರೆಗೆ ಮಂಗಳೂರು ಪ್ರೀಮಿಯರ್ ಲೀಗ್-2015 (ಎಂಪಿಎಲ್) ಟಿ-20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್, ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ನ ಮಾರ್ಗದರ್ಶನದಲ್ಲಿ ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡಮಿ ಮತ್ತು ನಗರದ ಸ್ಥಳೀಯ ಕ್ರಿಕೆಟ್ ಸಂಘಟನೆಯ ಸಹಯೋಗದೊಂದಿಗೆ ಈ ಪಂದ್ಯಾವಳಿ ನಡೆಯಲಿದೆ ಎಂದರು.
ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಸಿರಾಜುದ್ದೀನ್ ಮಾತನಾಡಿ, ಪಂದ್ಯಾವಳಿಯಲ್ಲಿ 10 ತಂಡಗಳು ಮತ್ತು 200 ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ವಿಜೇತ ಪ್ರಥಮ ತಂಡಕ್ಕೆ ಎಂಪಿಎಲ್ ಟ್ರೋಫಿ ಹಾಗೂ 4 ಲಕ್ಷ ನಗದು ಮತ್ತು ದ್ವಿತೀಯ ವಿಜೇತ ತಂಡಕ್ಕೆ ಟ್ರೋಫಿ ಹಾಗೂ 2 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು. ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಅವುಗಳಲ್ಲಿ ಒಂದು ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂಪಿಎಲ್ನ ಟೈಟಲ್ ಪ್ರಾಯೋಜಕ ಹಾಗೂ ಸೌದಿ ಅರೇಬಿಯಾದ ಅಮ್ಯಾಕೊ ಸಂಸ್ಥೆಯ ಸಿಇಒ ಆಸಿಫ್ ಮುಹಮ್ಮದ್, ಉದ್ಯಮಿ ಹಾಗೂ ಎಂಪಿಎಲ್ ಸಲಹಾ ಸಮಿತಿ ಸದಸ್ಯ ಇಸ್ಮಾಯೀಲ್ ಉಳ್ಳಾಲ, ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯಶನ್ ಮಂಗಳೂರು ವಲಯದ ಅಧ್ಯಕ್ಷ ರತನ್ ಕುಮಾರ್, ಎಂಪಿಎಲ್ ಸಲಹಾ ಸಮಿತಿ ಸದಸ್ಯ ಹಾಗೂ ಹಿದಾಯ ಫೌಂಡೇಶನ್ನ ಕಾರ್ಯದರ್ಶಿ ಹನೀಫ್ ಜಿ. ಮೊದಲಾದವರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಿರಾಜುದ್ದೀನ್ ಮೊಬೈಲ್ ಸಂಖ್ಯೆ 9731851135 ಮತ್ತು ಇಮ್ತಿಯಾಝ್ 7760194643 ಅವರನ್ನು ಸಂಪರ್ಕಿಸಬಹುದು.




