ಚಿತ್ರದುರ್ಗ ಮೇ 31-ಹಸುಳೆ ಕೈಯಲ್ಲಿದ್ದ ಪ್ಲಾಸ್ಟರ್ ತೆಗೆಯುವ ಬದಲು ಬೆರಳನ್ನು ಕತ್ತರಿಸಿದ ಘಟನೆ ಇನ್ನೂ ಮಾಸುವ ಮುನ್ನವೇ ಬಸವೇಶ್ವರ ಆಸ್ಪತ್ರೆ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನಿಗೆ ಆಪರೇಷನ್ ಮಾಡುವಾಗ ಕರುಳಿಗೆ ಬಟ್ಟೆ ಸುತ್ತಿ ಮತ್ತೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ತಾಲ್ಲೂಕಿನ ದೊಡ್ಡಾಪುರ ಗ್ರಾಮದ ವೆಂಕಟೇಶ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಬಸವೇಶ್ವರ ಆಸ್ಪತ್ರೆಗೆ ಮೇ 13 ರಂದು ತಪಾಸಣೆ ಮಾಡಿದಾಗ ವೈದ್ಯರು ಅಲ್ಸರ್ಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದರು. ಅದರಂತೆ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ನಂತರ ಮೇ 15ರಂದು ಆಸ್ಪತ್ರೆಯಿಂದ ಬಿಡುಗಡೆಯಾದರು.
ಮನೆಗೆ ಹೋದ ವೆಂಕಟೇಶ್ ನೀರು, ಎಳನೀರು ಕುಡಿದರೂ ಒಂದು ಹನಿ ನೀರು ಇಲ್ಲದಂತೆ ವಾಂತಿ ಆಗುತ್ತಿತ್ತು. ಅನ್ನ, ಗಂಜಿ ಯಾವುದನ್ನು ಸೇವಿಸದಂತಾದರು. ವೆಂಕಟೇಶ್ ಆರೋಗ್ಯ ಸ್ಥಿತಿ ಗಂಭೀರವಾಯಿತು. ಪುನಃ ಬಸವೇಶ್ವರ ಆಸ್ಪತ್ರೆಗೆ ತೋರಿಸಿ ಸ್ಕ್ಯಾನಿಂಗ್ ಮಾಡಿಸಿದರೂ ಏನು ಇಲ್ಲವೆಂದು ವೈದ್ಯರು ಹೇಳಿದರೆಂದು ರೋಗಿಗಳ ಸಂಬಂಧಿ ಆರೋಪಿಸಿದ್ದಾರೆ. ವೆಂಕಟೇಶ್ನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಮಣಿಪಾಲ್ ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಗಡ್ಡೆ ಇರುವಂತೆ ಕಂಡುಬಂದಿತ್ತು. ತಕ್ಷಣ ಶಸ್ತ್ರಚಿಕಿತ್ಸೆ ಮಾಡಲಾಯಿತು. ದುರ್ಮಾಂಸವನ್ನು ಹೊರತೆಗೆದ ವೈದ್ಯರು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದರು. ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವ ವೇಳೆ ಕರುಳಿಗೆ ಬಟ್ಟೆ ಸುತ್ತಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಒಂದು ವೇಳೆ ಇನ್ನೂ ಸ್ಪಲ್ಪ ದಿನ ಹಾಗೇ ಬಿಟ್ಟಿದ್ದರೆ ವೆಂಕಟೇಶ್ ಜೀವಂತವಾಗಿ ಇರುತ್ತಿರಲಿಲ್ಲ.
ಮಣಿಪಾಲ್ ಆಸ್ಪತ್ರೆಯಲ್ಲಿ ಇನ್ನೂ ವೆಂಕಟೇಶ್ ಚಿಕಿತ್ಸೆ ಪಡೆಯುತ್ತಿದ್ದು ಈತ ಸಂಬಂಧಿಕರು ಪರಿಹಾರ ನೀಡುವಂತೆ ಆಸ್ಪತ್ರೆ ಮುಖ್ಯಸ್ಥರನ್ನು ಒತ್ತಾಯಿಸಿದ್ದು, ಅವರೊಂದಿಗೆ ನಡೆದ ಮಾತುಕತೆ ವಿಫಲವಾಗಿದೆ.. ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಖರ್ಚು-ವೆಚ್ಚ ಸಂಪೂರ್ಣವಾಗಿ ಭರಿಸಬೇಕೆಂದು ರೋಗಿಯ ಸಹೋದರರು ಮತ್ತು ಸಂಬಂಧಿಕರು ಒತ್ತಾಯಿಸಿದ್ದಾರೆ.
