ಮಂಗಳೂರು,ಮಾರ್ಚ್.31: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಮಠದ ಟೆಲಿಫೋನ್ ಎಕ್ಸ್ ಚೇಂಜ್ ಬಳಿ ಇಡಲಾಗಿತ್ತು ಎನ್ನಲಾದ ಎಂಟು ಸಜೀವ ಪೆಟ್ರೋಲ್ ಬಾಂಬ್ಗಳು ಹಾಗೂ ಹರಿತವಾದ ಅಯುಧಗಳನ್ನು ಬಜ್ಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟೆಲಿಫೋನ್ ಎಕ್ಸ್ ಚೇಂಜ್ ಬಳಿ ವಾಸ್ತವ್ಯ ಹೊಂದಿರುವ ಸ್ಥಳೀಯ ಕುಟುಂಬವೊಂದರ ಸದಸ್ಯರು ಇಂದು ಬೆಳಿಗ್ಗೆ ಟೆಲಿಫೋನ್ ಎಕ್ಷೆಂಜ್ ಬಳಿಯಿರುವ ಕಸದ ರಾಶಿಯಲ್ಲಿದ್ದ ಬಾಂಬ್ ಮತ್ತು ತಲವಾರ್ಗಳನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಕಸದ ರಾಶಿಯಲ್ಲಿಟ್ಟಿದ್ದ ಎಂಟು ಸಜೀವ ಪೆಟ್ರೋಲ್ ಬಾಂಬ್ಗಳು ಮತ್ತು ತಲವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಮುರುಗನ್ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಪ್ಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ದುರುದ್ದೇಶದಿಂದ ಈ ರೀತಿ ಬಾಂಬ್ಗಳನ್ನು ಇಡಲಾಗಿತ್ತು ಎಂದು ಶಂಕಿಸಲಾಗಿದೆ.

