ಕುಂದಾಪುರ: ಮೃತ ಜಾನುವಾರು ದೇಹವೊಂದು ಮದಗದಲ್ಲಿ ಪತ್ತೆಯಾದ ಘಟನೆ ಶುಕ್ರವಾರ ಬೆಳಿಗ್ಗೆ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಗುಜ್ಜಾಡಿ-ಮುಳ್ಳಿಕಟ್ಟೆ ಮಾರ್ಗದಲ್ಲಿರುವ ಮದಗದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಜಾನುವಾರು ದೇಹವೊಂದು ಕೊಳೆತುಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ. ಅಕ್ರಮವಾಗಿ ಜಾನುವಾರು ಸಾಗಾಟದ ವೇಳೆ ಈ ಜಾನುವಾರು ಮೃತಪಟ್ಟಿದ್ದು, ಬಳಿಕ ಆರೋಪಿಗಳು ಈ ಮೃತ ಜಾನುವಾರನ್ನು ಗುಜ್ಜಾಡಿಯ ಮದಗದ ಬಳಿ ಎಸೆದು ಹೋಗಿರಬಹುದೆಂದು ಶಂಕಿಸಲಾಗಿದೆ. ಜಾನುವಾರು ಮೃತದೇಹ ಪತ್ತೆಯಾದ ಜಾಗದಲ್ಲಿ ಲಘು ವಾಹನವೊಂದರ ಚಕ್ರದ ಗುರುತು ಕಂಡು ಬಂದಿದ್ದು, ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವವರೇ ಈ ಕೃತ್ಯ ಎಸಗಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಕಳೆದ ಸುಮಾರು ಒಂದು ವಾರದ ಹಿಂದೆ ಓಮ್ನಿ ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟದ ಸಂದರ್ಭ ಎರಡು ಜಾನುವಾರುಗಳ ಪೈಕಿ ಒಂದು ಜಾನುವಾರು ಮೃತಪಟ್ಟಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಜಾನುವಾರು ಮೃತಪಟ್ಟು ಸುಮಾರು 2ದಿನಗಳು ಕಳೆದಿದೆ ಎಂದು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತಪಟ್ಟ ಜಾನುವಾರನ್ನು ಮದಗಕ್ಕೆ ಎಸೆಯಲಾಗಿದೆಯೇ ಅಥವಾ ಮದಗಕ್ಕೆ ಬಿದ್ದು ಜಾನುವಾರು ಮೃತಪಟ್ಟಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
