ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಜುಲೈ.19 : ಬಂಟರ ಯಾನೆ ನಾಡವರ ಮಾತೃಸಂಘದ ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತುಗಳಿಗೆ ನೂತನವಾಗಿ ಆಯ್ಕೆಯಾದ ಸಮಾಜ ಬಾಂಧವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ರವಿವಾರ ನಗರದ ಬಂಟ್ಸ್ ಹಾಸ್ಟೆಲ್ನ ಎ.ಬಿ. ಶೆಟ್ಟಿ ಸಭಾಂಗಣದಲ್ಲಿ ಜರಗಿತ್ತು.
ಕರ್ನಾಟಕದ ಮಾಜಿ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯ ಶ್ರೀ ಜಯಪ್ರಕಾಶ ಹೆಗ್ಡೆ ಅವರು ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಬಳಿಕ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಜಯಪ್ರಕಾಶ ಹೆಗ್ಡೆಯವರು ಎಲ್ಲಾ ಜಾತಿಯ ಮತಗಳನ್ನು ಪಡೆದು ನೀವು ಜಯಗಳಿಸಿದ್ದೀರಿ. ಇದರಿಂದಾಗಿ ಇಡೀ ಊರಿನ ಸಮಗ್ರ ಅಭಿವೃದ್ಧಿ ಮಾಡುವ ದೃಷ್ಠಿಕೋನದಿಂದ ಎಲ್ಲರ ವಿಶ್ವಾಸ ಗಳಿಸಿಕೊಂಡು ತನ್ನ ಕರ್ತವ್ಯವನಿರ್ವಹಿಸಬೇಕು. ಪ್ರಮಾಣಿಕತೆಮತ್ತು ಅರ್ಪಣಾ ಭಾವದಿಂದ ಕೆಲಸ ಕಾರ್ಯಗಳನ್ನು ಮಾಡಿದಾಗ ಅಂತವರ ಹೆಸರು ಅಕಾರ ಇಲ್ಲದಿದ್ದರೂ, ಶಾಶ್ವತವಾಗಿ ಉಳಿಯುತ್ತದೆ ಎಂದರು.
ಜನತೆ ನಿಮ್ಮಲ್ಲಿ ವಿಶ್ವಾಸವಿಟ್ಟು ಗ್ರಾಮ ಪಂಚಾಯಿತಿ ಗೆ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಕೆಲಸ ಮಾಡುವಂತೆ ನಿಮ್ಮನ್ನು ಒತ್ತಾಯಿಸುವುದು ಜನರ ಹಕ್ಕು. ಅವರ ಬೇಡಿಕೆಗಳಿಗೆ ಸ್ಪಂದಿಸುವುದು ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ ಅವರು, ಪಂಚಾಯಿತಿ ಚುನಾವಣೆ ಗೆಲ್ಲುವುದು, ಸಂಸದ, ಶಾಸಕರ ಆಯ್ಕೆಗಿಂತಲೂ ಕಷ್ಟ. ಸಂಸದರಿಗೆ ಅಥವಾ ಶಾಸಕರಿಗೆ ಒಂದು ಕಡೆ ಕಡಿಮೆ ಮತ ಬಂದರೂ, ಮತ್ತೊಂದು ಕಡೆ ಹೆಚ್ಚು ಮತ ಪಡೆದು ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಇಲ್ಲಿ ಆ ಪರಿಸ್ಥಿತಿ ಇರುವುದಿಲ್ಲ . ಇಂತಹ ಅವಕಾಶ ಪಡೆದಿರುವ ನೀವು ಮುಂದೆ ಇನ್ನಷ್ಟು ಉತ್ತಮ ಅವಕಾಶ ಬರಬಹುದು ಎಂಬ ಆಶಾವಾದಿಗಳಾಗಿ ಕೆಲಸ ಮಾಡಬೇಕು ಎಂದರು.
ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಶಾಸಕರ ಪಾಲ್ಗೊಳ್ಳುವ ಪದ್ಧತಿ ರದ್ಧಾಗಬೇಕು. ಅಕಾರ ವಿಕೇಂದ್ರೀಕರಣದ ಆಶಯ ಈಡೇರಬೇಕಾದರೆ, ತಾಲೂಕು ಪಂಚಾಯಿತಿ ಮತ್ತು ಜಿ.ಪಂಗಳಲ್ಲಿ ಸದಸ್ಯರೇ ತಮ್ಮ ನಿರ್ಧಾರ ಕೈಗೊಳ್ಳಬೇಕು. ಶಾಸಕರ ಒತ್ತಡ ಇಲ್ಲಿ ಪ್ರಭಾವ ಬೀರದಂತೆ ವ್ಯವಸ್ಥೆಯಾಗಬೇಕು. ಈ ಬಗ್ಗೆ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಚರ್ಚೆಯಾಗಬೇಕು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಶ್ರೀ ಮಾಲಾಡಿ ಅಜಿತ್ಕುಮಾರ್ ರೈಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚೆಗೆ ಗ್ರಾಮ ಪಂಚಾಯತುಗಳಿಗೆ ಜರಗಿದೆ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯ ಬಂಟ ಸಮಾಜದ ಅಭ್ಯರ್ಥಿಗಳು ವಿಜಯಗಳಿಸಿರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯಾದ ಗ್ರಾಮ ಪಂಚಾಯತುಗಳು ಆದರ್ಶ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ, ಆ ಮುಖೇನ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಪ್ರಗತಿಯಾಗಲು ಸಾಧ್ಯ. ನೂತನವಾಗಿ ಆಯ್ಕೆಯಾದ ಸಮಾಜದ ಬಂಧುಗಳನ್ನು ಅಭಿನಂದಿಸುವುದರಿಂದ ಅವರು ಇನ್ನೂ ಹೆಚ್ಚಿನ ಉತ್ಸಾಹದಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಪ್ರೋತ್ಸಾಹಿಸಿದಂತಾಗುವುದು. ಮಾತ್ರವಲ್ಲದೆ, ಸಂಘವು ಗ್ರಾಮೀಣ ಪ್ರದೇಶದ ಎಲ್ಲಾ ಸಮಾಜ ಬಾಂಧವರೊಂದಿಗೆ ಇನ್ನೂ ಹೆಚ್ಚಿನ ನಿಕಟ ಬಾಂಧವ್ಯವನ್ನುಉಳಿಸಲು ಮತ್ತು ಬೆಳೆಸಲು ಸಹಕಾರಿ ಯಾಗುವುದು ಎಂದು ಮಾಲಾಡಿ ಅಜಿತ್ ಕುಮಾರ್ ರೈಯವರು ಈ ಸಂದರ್ಭದಲ್ಲಿ ತಿಳಿಸಿದರು.
ಬಂಟ ಸಮಾಜವು, ಅನಾದಿಕಾಲದಿಂದಲೂ ಧಾರ್ಮಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿ ಯಲ್ಲಿದ್ದು, ಎಲ್ಲಾ ಜಾತಿ ಮತ ವರ್ಗಗಳ ಜನರ ಕಷ್ಟ ಸುಖ- ದುಃಖಗಳಲ್ಲಿ ಬಾಗಿಯಾಗಿ, ಎಲ್ಲರನ್ನೂ ಅರಿತುಕೊಂಡು ಸಾಮರಸ್ಯದ ಸಹಜೀವನವನ್ನು ನಡೆಸಿ ತಮ್ಮ ಅನುಕರಣೀಯ ನಡತೆಯಿಂದ ಎಲ್ಲಾ ಜಾತಿ, ಮತ ಬಾಂಧವರ ಪ್ರೀತ್ಯಾದರಗಳನ್ನು ಗಳಿಸಿ ಗೌರಾನ್ವಿತ ಸ್ಥಾನಮಾನಗಳನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತುಗಳಿಗೆ ಇತ್ತೀಚೆಗೆ ಜರಗಿದ ಚುನಾವಣೆಯಲ್ಲಿ ಆಯ್ಕೆಯಾದ ಸಮಾಜದ ಬಂಧುಗಳನ್ನು ಮಾತೃಸಂಘದ ವತಿಯಿಂದ ಇಂದು ಅಭಿನಂದಿಸುತ್ತಿರುವುದಾಗಿ ಅಜಿತ್ ಕುಮಾರ್ ರೈಯವರು ಹೇಳಿದರು.
ಆಧುನಿಕ ಪರಿಸ್ಥಿತಿಯಲ್ಲಿ ನಮ್ಮ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ನೆರವಿನ ಮನೋಭಾವ ಕಡಿಮೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಮಾಜ ಬಾಂಧವರನ್ನು ಮಾತೃ ಸಂಘದೊಂದಿಗೆ ಜೋಡಿಸುವ ಕೆಲಸವನ್ನು ಗ್ರಾ. ಪಂ. ಚುನಾಯಿತ ಸದಸ್ಯರಿಗೆ ಸನ್ಮಾನಮಾಡುವ ಮೂಲಕ ಮಾಡಲಾಗಿದೆ. ಮುಂದೆ ಪ್ರತೀ ತಾಲೂಕಿನಲ್ಲಿ ೫ರಿಂದ ೧೦ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಸಭೆ ನಡೆಸಿ, ನಮ್ಮ ಸಮಾಜವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಬಂಟರಲ್ಲಿ ಶೇ.40ರಷ್ಟು ಮಂದಿ ಬಡವರಿದ್ದಾರೆ. ಸಾಕಷ್ಟು ಮಂದಿ ಶ್ರೀಮಂತರು ಇದ್ದಾರೆ. ಶಕ್ತಿಯಿಂದ ಅಶಕ್ತರಿಗೆ ನೆರವು ನೀಡುವ ಉದ್ದೇಶಕ್ಕಾಗಿ ಸಮಗ್ರ ಸಮೀಕ್ಷೆ ನಡೆಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಡಿಸೆಂಬರ್ನಲ್ಲಿ ಜಾಗತಿಕ ಬಂಟರ ಸಮ್ಮೇಳನ ನಡೆಯಲಿದೆ. ಸುಮಾರು 180ರಿಂದ 200 ಕೋಟಿ ರೂ.ಗಳ ವೆಚ್ಚದಲ್ಲಿ ಬಂಟ್ಸ್ಹಾಸ್ಟೆಲ್ನಲ್ಲಿ ನೂತನ ಸಭಾಂಗಣ ನಿರ್ಮಾಣವಾಗಲಿದೆ ಎಂದು ಅಜಿತ್ ಕುಮಾರ್ ರೈಯವರು ಹೇಳಿದರು.
ಸನ್ಮಾನ ಕಾರ್ಯಕ್ರಮ ಆರಂಭದಲ್ಲಿ ಬಂಟ ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ದ.ಕ. ಮತ್ತು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತುಗಳಿಗೆ ನೂತನವಾಗಿ ಆಯ್ಕೆಯಾದ ಸುಮಾರು 660 ಮಂದಿ ಸದಸ್ಯರನ್ನು ಅತಿಥಿಗಳು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು.
ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಕಾವು ವಂದಿಸಿದರು. ಸುಕೇಶ್ ಚೌಟ ಕಾರ್ಯಕ್ರಮ ನಿರೂಪಿಸಿದರು.
ಖ್ಯಾತ ಉದ್ಯಮಿ ಎ.ಜೆ.ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಮಹಿಳಾ ಘಟಕದ ಸಂಚಾಲಕರಾದ ಡಾ| ಆಶಾ ಜ್ಯೋತಿ ರೈ, ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ ಸಿಎ.ಕೆ.ಮನ್ಮೋಹನ್ ಶೆಟ್ಟಿ, ಮಂಗಳೂರು ತಾಲೂಕು ಸಮಿತಿ ಸಂಚಾಲಕ ಶ್ರೀ ಯಸ್. ಜಯರಾಮ ಸಾಂತ, ಸಹ ಸಂಚಾಲಕ ಶ್ರೀ ಉಮೇಶ ರೈ. ಅಭಿನಂದನಾ ಕಾರ್ಯಕ್ರಮ ಸಮಿತಿ ಸಂಚಾಲಕ ದಿವಾಕರ ಸಾಮಾನಿ, ಸಮನ್ವಯಕಾರ ಶ್ರೀ ಉಲ್ಲಾಸ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
_ Sathish Kapikad