ಕರಾವಳಿ

ಮಫ್ತಿಯಲ್ಲಿ ವಾಹನ ತಪಾಸಣೆ: ಉಡುಪಿ ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಷ; ಪೊಲೀಸರು ಕೊಟ್ಟ ಸ್ಪಷ್ಟನೆಯೇನು?

Pinterest LinkedIn Tumblr

ಉಡುಪಿ: ನಗರದ ಪಿಪಿಸಿ ಕಾಲೇಜು ಸಮೀಪ ಪೊಲೀಸರು ಸಮವಸ್ತ್ರ ಧರಿಸದ, ಮಫ್ತಿಯಲ್ಲಿ ಇರುವ ಪೊಲೀಸರು ದ್ವಿಚಕ್ರ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದಾರೆಂದು ಗುರುವಾರ ಸಂಜೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ನಡೆದ ನೈಜ್ಯತೆಯೇ ಬೇರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.

ಪೊಲೀಸರು ಹೇಳೋದೇನು?
ಗುರುವಾರ ಸಂಜೆ ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕ ನಾರಾಯಣ ಗಾಣಿಗರವರು ಉಡುಪಿಯ ಮೀನು ಮಾರ್ಕೇಟ್ ಬಳಿ ಇಲಾಖಾ ಜೀಪಿನಲ್ಲಿ ಸಿಬ್ಬಂದಿಗಳಾದ ರಾಜೀವ ಹಾಗೂ ಸಿದ್ದಣ್ಣ ಗಂಗನಳ್ಳಿರವರೊಂದಿಗೆ ಸಮವಸ್ತ್ರದಲ್ಲಿ ವಾಹನ ತಪಾಸಣೆ ನಡೆಸಿ, ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ, ದಂಡ ಕಟ್ಟುವವರಿಂದ ದಂಡವನ್ನು ಸಂಗ್ರಹಿಸುತ್ತಿದ್ದು 11 ಪ್ರಕರಣವನ್ನು ದಾಖಲಿಸಿದ್ದರು. ಆ ವೇಳೆ ಬೈಕ್ ಸವಾರ ಹೆಲ್ಮೇಟ್ ಧರಿಸದೇ ಆ ಮಾರ್ಗವಾಗಿ ಬಂದಿದ್ದು ವಾಹನ ತಪಾಸಣೆ ನಡೆಸುವ ಸಲುವಾಗಿ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದ್ದು ಆತ ಯಾರಿಗೋ ತನ್ನ ಮೊಬೈಲ್‌ನಲ್ಲಿ ಕರೆ ಮಾಡಿ ಮಾತನಾಡಿದ್ದ. ಅದಾದ ಸ್ಪಲ್ಪ ಸಮಯದಲ್ಲಿಯೇ ಓರ್ವ ವ್ಯಕ್ತಿ ಸ್ಥಳಕ್ಕೆ ಬಂದು ಪೊಲೀಸ್ ಉಪನಿರೀಕ್ಷಕರ ಇಲಾಖಾ ಜೀಪಿನ ಎದುರು ಅಡ್ಡ ಬಂದು ಜೀಪನ್ನು ನಿಲ್ಲಿಸಿ ನೀವು, ಇಲ್ಲಿ ಯಾಕೆ ಕೇಸು ಹಾಕುವುದು, ಕೆಳಗೆ ಇಳಿಯಿರಿ ಎಂದು ಹೇಳುತ್ತಾ ಪೊಲೀಸ್ ಉಪನಿರೀಕ್ಷಕರು ಕುಳಿತಿದ್ದ ಸೀಟಿನ ಬಳಿ ಬಂದು, ಜೀಪಿನ ಬಾಗಿಲನ್ನು ಹಿಡಿದು ತನ್ನ ಕೈಯ್ಯನ್ನು ಜೀಪಿನ ಒಳಗೆ ಹಾಕಿ ಪೊಲೀಸ್ ಉಪನಿರೀಕ್ಷಕರಿಗೆ ತಾಗಿಸಿ ಇಲ್ಲಿ ಯಾಕೆ ಕೇಸು ಹಾಕುವುದು, ಕೆಳಗೆ ಇಳಿಯಿರಿ ಎಂದು ಜೋರಾಗಿ ಕೂಗಾಡಲು ಪ್ರಾರಂಭಿಸಿದನು. ಆಗ ಸ್ಥಳದಲ್ಲಿ ಜನರು ಸೇರುತ್ತಿದ್ದುದನ್ನು ಗಮನಿಸಿ ಪೊಲೀಸ್ ಉಪನಿರೀಕ್ಷಕರು ಠಾಣೆಗೆ ಮಾಹಿತಿ ನೀಡಿದ ಮೇರೆಗೆ, ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಸುಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿ ಕೊರತೆ ಇದ್ದ ಕಾರಣ ಹಿಂದಿನ ದಿನ ರಾತ್ರಿ ಕರ್ತವ್ಯವನ್ನು ನಿರ್ವಹಿಸಿ, ಘಟನೆ ದಿನವೂ ಸಹ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡ ಸಾದಾ ಉಡುಪಿನಲ್ಲಿದ್ದ ಸಿಬ್ಬಂದಿ ಮಲ್ಲೇಶರವರು ಸಹಾಯಕ್ಕಾಗಿ ಸ್ಥಳಕ್ಕೆ ಬಂದಿದ್ದಾರೆ. ಆಗ ಮಲ್ಲೇಶರವರು ಆ ವ್ಯಕ್ತಿಗೆ ಸಮಾಧಾನ ಮಾಡುತ್ತಿದ್ದಾಗ ಆ ವ್ಯಕ್ತಿ ಮಲ್ಲೇಶರವರನ್ನು ಉದ್ಧೇಶಿಸಿ ನೀವು ಯಾರು? ನನಗೆ ಹೇಳುವುದು ಎಂದು ಏರುಧ್ವನಿಯಲ್ಲಿ ಜೋರು ಮಾಡಿದ್ದಾರೆ. ನಂತರ ಸ್ಥಳದಲ್ಲಿ ಹೆಚ್ಚಿನ ಜನರು ಸೇರುವುದನ್ನು ಕಂಡ ಆ ವ್ಯಕ್ತಿ ಬೈಕಿನಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕುಳ್ಳಿರಿಸಿಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ.

ಆವೇಳೆ ಪೊಲೀಸ್ ಉಪನಿರೀಕ್ಷಕರು ಸಮವಸ್ತ್ರದಲ್ಲಿ ಇತರ ಸಿಬ್ಬಂದಿಯವರೊಂದಿಗೆ ಕರ್ತವ್ಯ ನಿರ್ವಹಿಸುತ್ತಾ, ಸರ್ಕಾರವು ಹೊರಡಿಸಿದ ಸುತ್ತೋಲೆಯ ಆದೇಶದಂತೆ, ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದು, ಕರ್ತವ್ಯದಲ್ಲಿ ಯಾವುದೇ ಲೋಪ ಎಸಗಿಲ್ಲ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.

Comments are closed.