ಕುಂದಾಪುರ: ವಾತಾವರಣ ಸರಿಯಿಲ್ಲ ಎಂದು ಆ ಬಗ್ಗೆ ಪ್ರತಿಭಟನೆ, ಪ್ರತಿಪಾದನೆ ಮಾಡುವ ಮೊದಲು ಜನಕ್ಕೊಬ್ಬರು ಗಿಡ ನೆಡುವ ಕಾರ್ಯವಾಗಬೇಕು. ಮೊದಲು ಪರಿಸರ ಕಾಳಜಿಯನ್ನು ನಾವುಗಳು ಅರಿಯಬೇಕು. ಮನೆಯಲ್ಲಿನ ಶುಭ ಕಾರ್ಯ ಸಂದರ್ಭ ಗಿಡ ವಿತರಣೆ, ಅಶಕ್ತರಿಗೆ ಸಹಕಾರ ಮಾಡುವ ಕೆಲಸವಾಗಬೇಕು, ಇದರಿಂದ ಲೋಕಹಿತ ಸಾಧ್ಯ ಎಂದು ಶೃಂಗೇರಿ ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ ಗುರೂಜಿಯವರು ಹೇಳಿದರು.
ಕುಂದಾಪುರದ ಆನಗಳ್ಳಿಯಲ್ಲಿರುವ ಶ್ರೀ ದತ್ತಾಶ್ರಮದಲ್ಲಿ ಶನಿವಾರ ಸಂಜೆ ಸಾರ್ವಜನಿಕರು ಮತ್ತು ಭಕ್ತರಿಗೆ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.
ಹಳ್ಳಿಯಲ್ಲಿರುವ ಸಭ್ಯತೆ, ಮುಗ್ದತೆ, ಸ್ನೇಹತ್ವ, ಬಾಂಧವ್ಯ ಯಾವುದೇ ನಗರದಲ್ಲಿ ಸಿಗುವುದಿಲ್ಲ. ಹಳ್ಳಿಗಳಲ್ಲಿ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಅಂತಹ ಭಾವನೆಗಳಿಂದ ಭವ್ಯ ಭಾರತ ನಿರ್ಮಾಣ ಸಾಧ್ಯವಿದೆ. ಆರಾಧನೆಗಳ ಬಗ್ಗೆ ಯಾವುದೇ ಟೀಕೆ ಮಾಡಿಲ್ಲ, ಬದಲಾಗಿ ಸರಳ ಆಚರಣೆ ಬಗ್ಗೆ ತಿಳಿಸಿದ್ದೇನೆ ಅಷ್ಟೆ. ಪೂಜೆ ಪುನಸ್ಕಾರಗಳಲ್ಲಿ ಶೃದ್ಧೆ ಅಗತ್ಯವೇ ಹೊರತು ಆಡಂಭರವಲ್ಲ. ಪ್ರಕೃತಿ ಪೂಜೆಯೇ ನಿಜವಾದ ದೇವರ ಆರಾಧನೆ. ದೇವರನ್ನು ನಂಬುವ ಜೊತೆಗೆ ದೇಹ ಮತ್ತು ಪ್ರಕೃತಿಯನ್ನು ನಂಬಬೇಕಿದೆ. ಜಗತ್ತಿಗೆ ಬೇಕಾದ ಅಗತ್ಯತೆಗಳನ್ನು ಮೊದಲು ನಾವುಗಳು ಅರಿಯಬೇಕಿದೆ. ಜಾತಿ ಪದ್ಧತಿಯನ್ನು ಹೊಗಲಾಡಿಸಿ ದೇಶವನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಚಿಂತನೆಗಳು ಬದಲಾಗುವದರೊಂದಿಗೆ ನೂತನ ಆವಿಷ್ಕಾರದತ್ತ ಮುಖ ಮಾಡಬೇಕಿದೆ ಎಂದರು.
ಆನಗಳ್ಳಿಯ ಈ ದತ್ತಾಶ್ರಮದಲ್ಲಿ ಸಮಾಜದ ಒಳಿತಿಗಾಗಿ ವಾರಕ್ಕೋಮ್ಮೆಯದರೂ ಸಾಮೂಹಿಕ ಪ್ರಾರ್ಥನೆ ನಡೆಯಬೇಕು. ಆಶ್ರಮದಲ್ಲಿ ಮುಂದಿನ ದಿನಗಳಲ್ಲಿ ಮಳೆ ನೀರು ಇಂಗಿಸುವ ಪ್ರಕ್ರಿಯೆ, ಗೋ ಶಾಲೆ, ಗಿಡ ನೆಡುವ ಕಾರ್ಯಕ್ರಮದಂತಹ ಸಮಾಜಮುಖಿ ಕಾರ್ಯಗಳಾಗುವ ಮೂಲಕ ಧರ್ಮ ಆಚರಣೆಯಾಗಬೇಕು ಎಂದು ಕರೆಕೊಟ್ಟರು.
ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಾಭ್ಯಾಸಕ್ಕಾಗಿ ಆಶ್ರಮದಲ್ಲಿಯೇ ವಸತಿ ಸೌಲಭ್ಯದ ಜೊತೆ ಉತ್ತಮ ಶಿಕ್ಷಣ ವ್ಯವಸ್ಥೆ, ದೇಶದ ವಿವಿದೆಡೆಯಿಂದ ಬರುವ ಸಾಧು ಸಂತರಿಗೆ ಆಶ್ರಮದಲ್ಲಿ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ, ವೈದ್ಯಕೀಯ ಮತ್ತು ಮದುವೆ ಕಾರ್ಯಗಳಿಗೆ ನೆರವು ನೀಡುವ ಮೂಲಕ ಆನಗಳ್ಳಿಯ ದತ್ತಾಶ್ರಮವು ಮಾನವೀಯ ಮೌಲ್ಯಗಳಿಗೆ ತೆರೆದುಕೊಂಡಿದೆ ಎಂದು ಅವಧೂತ ವಿನಯ ಗುರೂಜಿ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ದತ್ತಾಶ್ರಮದ ಪ್ರವರ್ತಕ ಸುಭಾಶ್ ಪೂಜಾರಿ ಸಂಗಮ್, ಹರೀಶ್ ತೋಳಾರ್, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಬೇಳೂರು ರಾಘವೇಂದ್ರ ಶೆಟ್ಟಿ, ಗೋಕುಲ್ ಶೆಟ್ಟಿ ಉಪ್ಪುಂದ, ಹರೀಶ್ ಶೆಟ್ಟಿ ಮಂಗಳೂರು, ವಿವೇಕ್ ಸುವರ್ಣ, ಭಜರಂಗದಳ ಸಂಚಾಲಕ ಸುನೀಲ್ ಕೆ.ಆರ್, ಗೌರಿಗದ್ದೆ ಆಶ್ರಮದ ಚಂದ್ರಶೇಖರ್ ಜೈಪುರ, ಸುಧಾಕರ ಗೌರಿಗದ್ದೆ ಮೊದಲಾದವರಿದ್ದರು.
ವರದಿ- ಯೋಗೀಶ್ ಕುಂಭಾಸಿ