ನವದೆಹಲಿ: ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ವಿವಾದಗಳು ಭುಗಿಲೆದ್ದಿದ್ದ ವೇಳೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ನಮಗೆ ಸ್ವಾತಂತ್ರ್ಯ ಬೇಕು (ಹಮೇ ಆಜಾದಿ ಚಾಹಿಯೇ) ಎಂದು ಘೋಷಣೆ ಕೂಗಿ ಮಾಡಿದ ಭಾಷಣ ಎಲ್ಲೆಡೆ ಸಂಚಲನ ಸೃಷ್ಟಿಸಿತ್ತು.
ಇದೀಗ ಆ ಆಜಾದಿ ಮಂತ್ರವನ್ನೇ ಬಳಸಿ ಟ್ರಾವೆಲ್ ಪೋರ್ಟಲ್ ಯಾತ್ರಾ ಡಾಟ್ ಕಾಂ ಹೊಸತೊಂದು ಜಾಹೀರಾತು ನಿರ್ಮಿಸಿದೆ.
ಏರ್ಪೋರ್ಟ್ಗೆ ಬಂದ ಕನಯ್ಯಾ ಕುಮಾರ್ನ್ನೇ ಹೋಲುವ ಯುವಕನೊಬ್ಬ ತನಗೆ ವಿಂಡೋ ಸೀಟು ಬೇಕು ಎಂದು ಕೇಳಿದಾಗ ಅದು ಇಲ್ಲ ಎಂಬ ಉತ್ತರ ಸಿಗುತ್ತದೆ. ಅಷ್ಟಕ್ಕೆ ಸಿಟ್ಟಿಗೆದ್ದ ಯುವಕ ಭಾಯಿಯೋ ಬೆಹನೋ ಎಂದು ಹೇಳಿ ತನ್ನ ಭಾಷಣ ಶುರು ಮಾಡುತ್ತಾನೆ. ನಮಗೆ ನಮ್ಮ ಸೀಟು ಆಯ್ಕೆ ಮಾಡುವ ಸ್ವಾತಂತ್ರ್ಯ ಬೇಕು, ವಿಂಡೋ ಸೀಟು ಬೇಕೆಂದು ಕೇಳುವ ಸ್ವಾತಂತ್ರ್ಯ ಬೇಕು ಎಂದು ಹೇಳುವಾಗ, ಅಲ್ಲಿರುವ ಪ್ರಯಾಣಿಕರೆಲ್ಲರೂ ನಮಗೂ ಆಜಾದಿ ಬೇಕು ಎಂದು ಘೋಷಣೆ ಕೂಗುವ ದೃಶ್ಯಗಳು ಜಾಹೀರಾತಿನಲ್ಲಿದೆ.
ಕನಯ್ಯಾ ಅವರ ಭಾಷಣದ ಧಾಟಿಯಲ್ಲಿಯೇ ಈ ಜಾಹೀರಾತಿನಲ್ಲಿರುವ ಯುವಕ ಭಾಷಣ ಮಾಡುತ್ತಿದ್ದು, ಈ ಜಾಹೀರಾತು ಸಾಮಾಜಿಕ ತಾಣದಲ್ಲೀಗ ವೈರಲ್ ಆಗಿದೆ.