ಕರಾವಳಿ

ವಲಸೆ ಕಾರ್ಮಿಕರ ಸಂಚಾರ : ಮಂಗಳೂರಿನಿಂದ ಉ.ಪ್ರ. ಬಿಹಾರಕ್ಕೆ ರೈಲು ನಿರ್ಗಮನ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ; ಬಿಹಾರ ಹಾಗೂ ಉತ್ತರ ಪ್ರದೇಶಗಳ ವಲಸೆ ಕಾರ್ಮಿಕರನ್ನು ಹೊತ್ತ 2 ರೈಲುಗಳು ಭಾನುವಾರ ಮಂಗಳೂರಿನಿಂದ ಹೊರಟಿದೆ.

ಭಾನುವಾರ ಮಧ್ಯಾಹ್ನ ಉತ್ತರ ಪ್ರದೇಶಕ್ಕೆ 1140 ಕಾರ್ಮಿಕರನ್ನು ಹೊತ್ತೊಯ್ದ ರೈಲು ಮಂಗಳೂರು ಜಂಕ್ಷನ್ ನಿಂದ ಹೊರಟಿತು. ಸಂಜೆ ಅಷ್ಟೇ ಸಂಖ್ಯೆಯ ಪ್ರಯಾಣಿಕರನ್ನು ಬಿಹಾರಕ್ಕೆ ಇನ್ನೊಂದು ರೈಲು ಹೊರಟಿದೆ.

ಉತ್ತರ ಪ್ರದೇಶಕ್ಕೆ ಹೋಗುವವರಿಗೆ ನಗರದ ಬಂದರ್, ಬೊಂಬಾಯಿ ಹೋಟೆಲ್, ಕಂಡತ್ ಪಳ್ಳಿ, ಕುದ್ರೋಳಿ, ಕಂಕನಾಡಿ, ಉಳ್ಳಾಲ ಹಾಗೂ ಬಿಹಾರಕ್ಕೆ ಹೋಗುವವರಿಗೆ ಪಣಂಬೂರು, ಜೋಕಟ್ಟೆ ಈ ಸ್ಥಳಗಳಿಂದ ವಲಸೆ ಕಾರ್ಮಿಕರನ್ನು ರೈಲು ನಿಲ್ದಾಣಕ್ಕೆ ಕರೆದುಕೊಂಡು ಬರಲು ಸುಮಾರು 23 ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು.

ಪ್ರತೀ ಬಸ್ಸಿಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ಮೇಲ್ವಿಚಾರಕರಾಗಿ ನೇಮಿಸಿ, ಅವರಿಗೆ ಒಬ್ಬರು ಗ್ರಾಮಕರಣಿಕರು ಹಾಗೂ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು.

ಬಸ್ಸು ಹತ್ತುವ ಮೊದಲೇ ಅವರ ಎಲ್ಲಾ ವಿವರ ಸಂಗ್ರಹಿಸಿ, ನಂತರ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಇದಕ್ಕಾಗಿ ಸುಸಜ್ಜಿತ ಆರೋಗ್ಯ ತಂಡವನ್ನು ನಿಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರ ಮೇಲ್ವಿಚಾರಣೆಯಲ್ಲಿ ನಡೆದ ಈ ಸಂಚಾರ ಪ್ರಕ್ರಿಯೆಯಲ್ಲಿ ಭಾಗವಹಿಸಲು, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಕರ್ತವ್ಯದಲ್ಲಿ ತೊಡಗಿದ್ದರು.

Comments are closed.