ಕರಾವಳಿ

ಕಟೀಲು ಬ್ರಹ್ಮಕಲಶೋತ್ಸವ  : 2 ತಿಂಗಳೊಳಗೆ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಸಂಸದ ಕಟೀಲ್ ಸೂಚನೆ

Pinterest LinkedIn Tumblr

ಮಂಗಳೂರು ಸೆಪ್ಟಂಬರ್ 20 : ಕಟೀಲು ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕಾಮಗಾರಿ ಹಾಗೂ ಇತರ ಕೆಲಸಗಳನ್ನು ಎರಡು ತಿಂಗಳೊಳಗೆ ಸಂಪೂರ್ಣಗೊಳಿಸಿ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಸೂಚಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕೋರ್ಟ್ ಹಾಲ್‍ನಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಭೆಯಲ್ಲಿ ಭಾಗವಹಿಸಿ ಮಾತಾನಾಡಿದ ಇವರು ರಸ್ತೆ ಅಗಲೀಕರಣಕ್ಕೆ ಎಸ್ಟಿಮೇಟ್(ಅಂದಾಜು) ಮಾಡುವಾಗ ಕಾಂಕ್ರೀಟ್ ಹಾಗೂ ಡಾಂಬರೀಕರಣ ರಸ್ತೆ ಮಾದರಿ ತೆಗೆದುಕೊಂಡು ನಂತರ ಅದರಲ್ಲಿ ಒಂದು ಮಾದರಿಯನ್ನು ಆಯ್ದುಕೊಳ್ಳಿ ಎಂದು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.

ಬೈಪಾಸ್ ರಸ್ತೆಯಾಗಿ ಉಲ್ಲಂಜೆ-ಮಿತ್ತಬೈಲು-ಪುಪಾಡಿಕಲ್ಲು-ಕೊಂಡೇಲದಿಂದ ಪದವಿ ಕಾಲೇಜು ಆಗಿ ರಸ್ತೆ ನಿರ್ಮಿಸಿ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಇರುವ ರಸ್ತೆಗಿಂತ 20 ಫೀಟ್ ಅಗಲೀಕರಣ ಮಾಡುವಂತೆ ಕ್ರಮ ಕೈಗೊಳ್ಳಿ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಜಾಗದ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆಯಿರಿ ಎಂದು ಹೇಳಿದರು.

ಅಂಗಡಿಗಳಿಗೆ ಪರವಾನಿಗೆ ನೀಡುವಾಗಲೇ ಎಲ್ಲಾ ನೀತಿ ನಿಯಮಗಳನ್ನು ನೀಡಲಾಗುತ್ತದೆ. ನಿಯಮಗಳನ್ನು ಪಾಲಿಸದೆ ಇರುವವರಿಗೆ ಒಂದು ವಾರಗಳ ಸಮಯ ನೀಡಿ ನಂತರವೂ ಪಾಲಿಸದೆ ಇದ್ದಲ್ಲಿ ಅಂತಹ ಅಂಗಡಿಯ ಪರವಾನಿಗೆಯನ್ನು ರದ್ದುಗೊಳಿಸಿ ಎಂದು ಸಭೆಯ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೊಟ ಶ್ರೀನಿವಾಸ ಪೂಜಾರಿ ಹೇಳಿದರು.

ಬೀದಿ ಬದಿಯಲ್ಲಿ ಅಂಗಡಿ ಇರುವುದರಿಂದ ಭಕ್ತಾಧಿಗಳಿಗೆ ತೊಂದರೆಯಾಗುವ ಕಾರಣಗಳಿಂದ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಸರ್ವೇ ಮಾಡಿ, ಸರಕಾರಿ ಜಾಗದಲ್ಲಿರುವ ಅಂಗಡಿಗಳಿಗೆ ನೋಟಿಸ್ ನೀಡಿ ಅಂತಹ ಅಂಗಡಿಗಳನ್ನು ಬಸ್ ನಿಲ್ದಾಣದ ಬಳಿ ತೆರೆಯಲು ಸ್ಥಳಾವಕಾಶ ಮಾಡಿ ಕೊಡಿ. ಅಂಗಡಿ ಸ್ಥಳಾಂತರಿಸಲು ಒಪ್ಪದ ಅಂಗಡಿ ಮಾಲಕರ ಅಂಗಡಿಯನ್ನು ತೆರವುಗೊಳಿಸಲು ಸೂಚನೆ ನೀಡಿದರು.

ಬ್ರಹ್ಮಕಲಶದ ವೆಚ್ಚಕ್ಕೆ ರೂ. ಐದು ಕೋಟಿ ನೀಡಲು ಸರ್ಕಾರ ದೇವಾಲಯದ ಆಡಳಿತ ಮಂಡಳಿಗೆ ಅನುಮೋದನೆ ನೀಡಿದೆ ಹಾಗೂ ಕಟೀಲು ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಶಾಸಕ ಉಮಾನಾಥ ಕೋಟ್ಯಾನ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಆರ್. ಸೆಲ್ವಮಣಿ, ಸಹಾಯಕ ಆಯುಕ್ತ ರವಿಚಂದ್ರ ನಾಯ್ಕ್ ಹಾಗೂ ಕಟೀಲ್ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಸಿಬ್ದಂದಿ ವರ್ಗದವರು ಉಪಸ್ಥಿತರಿದ್ದರು.

Comments are closed.