ಕರಾವಳಿ

ಪದವೀಧರರಾದರೆ ಸಾಲದು, ಸರಕಾರದ ಯೋಜನೆಗಳ ಪ್ರಯೋಜನ ಪಡೆಯಿರಿ : ವಿದ್ಯಾರ್ಥಿಗಳಿಗೆ ಯಡಪಡಿತ್ತಾಯ ಕರೆ

Pinterest LinkedIn Tumblr

ಮಂಗಳೂರು ಸೆಪ್ಟಂಬರ್ 16 : ಯುವ ಸಮುದಾಯ ಪದವೀಧರರಾದರೆ ಸಾಲದು, ಉತ್ತಮ ಕೌಶಲ್ಯ ಅಭಿವೃದ್ಧಿಯಾಗಿ, ಉದ್ಯೋಗಕ್ಕೆ ಅಣಿಯಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಎಸ್ ಯಡಪಡಿತ್ತಾಯ ಹೇಳಿದರು.

ಸೋಮವಾರ ಮಂಗಳೂರು ಪುರಭವನದಲ್ಲಿ ಎಮ್.ಐ.ಎಫ್.ಎಸ್.ಸಿ ವತಿಯಿಂದ ನಡೆದ ಕೌಶಲ್ಯ ಭಾರತ ಉದ್ಘಾಟನಾ ಸಮಾರಂಭದ ಉದ್ಘಾಟನೆ ನಡೆಸಿ ಮಾತಾನಾಡಿದ ಇವರು ಜನಸಂಖ್ಯೆ ಹೆಚ್ಚಾಗಿದೆ, ಜನರಿಗೆ ಉದ್ಯೋಗದಲ್ಲಿ ಸ್ಪರ್ಧೆಯು ಹೆಚ್ಚಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗದೆ ಅನುಕೂಲವಾಗುವಂತೆ ಉಚಿತ ತರಬೇತಿ ಯೋಜನೆಯನ್ನು ಕೇಂದ್ರ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.

ರಾಷ್ಟ್ರೀಯ ಮಟ್ಟದ ಕೌಶಲ್ಯ ತರಬೇತಿ ಕೇಂದ್ರವನ್ನು ಮಂಗಳೂರಿನಲ್ಲಿ ಪ್ರಾರಂಭ ಮಾಡಬೇಕು. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ. ತಾಳ್ಮೆ ಮತ್ತು ಸಮಾಧಾನದಿಂದ ಶಿಕ್ಷಣ ಕಲಿತು ಜೀವನದಲ್ಲಿ ಯಶಸ್ವಿಯಾಗಿ ದುಶ್ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಮುಂದಿನ ಪೀಳಿಗೆಗ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮಂಗಳೂರು ಶಾಸಕ ಯು.ಟಿ ಖಾದರ್ ಕಿವಿಮಾತು ಹೇಳಿದರು.

ಅನುಭವದ ನೆಲೆಯಲ್ಲಿ ವಿವಿಧ ವೃತ್ತಿಯನ್ನು ಜೀವನೋಪಾಯಕ್ಕೆಂದು ಆಯ್ದುಕೊಂಡಿರುವವರಿಗೂ ತರಬೇತಿ ನೀಡಿ ಪ್ರಮಾಣ ಪತ್ರ ನೀಡಬೇಕು ಎಲ್ಲಾ ವೃತಿಗಳಲ್ಲೂ ನೈಪುಣ್ಯತೆ ಹೊಂದಿರುವ ಉತ್ತಮ ವ್ಯಕ್ತಿಯಾಗಿ ತಾವು ಆಯ್ದುಕೊಂಡಿರುವ ಕೆಲಸದ ಬಗ್ಗೆ ವಿಶ್ವಾಸವಿರಬೇಕು. ಜೀವನದಲ್ಲಿ ಏರುಪೇರು ಸಾಮಾನ್ಯ ಆದರೆ ಯಾರೂ ದೃತಿಗೆಡದೆ ಮುನ್ನಡೆಯಿರಿ ಎಂದು ಮಂಗಳೂರು ಉತ್ತರ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.

ಸಮಾರಂಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಂಯೋಜಕ ರಘುವೀರ್ ಸೂಟರ್‍ಪೇಟೆ, ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಡೀನ್ ಡಾ. ಜಗದೀಶ್ ಹಾಗೂ ಎಮ್.ಐ.ಎಫ್.ಎಸ್.ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments are closed.