ಕರಾವಳಿ

ಶಿಕ್ಷಣದಿಂದ ಜೀವನ ಮೌಲ್ಯಗಳನ್ನು ಕಲಿಯುವುದು ಅಗತ್ಯ : ಪ್ರೊ. ಪಿ.ವಿ.ಕೃಷ್ಣ ಭಟ್

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ ಕ್ಷೇತ್ರಕ್ಕೆ ನಾಡಿಗೆ ಮತ್ತು ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಅದರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬಹುಮುಖ್ಯ ಪಾತ್ರವಿದೆ ಎಂದು ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯ ಕುಲಾಧಿಪತಿಗಳಾದ ಪ್ರೊ. ಪಿ.ವಿ. ಕೃಷ್ಣ ಭಟ್ ಶ್ಲಾಘಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ 40ನೇ ಯ ಸಂಸ್ಥಾಪನಾ ದಿನಾಚರಣೆಯನ್ನು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯು ದೇಶದ ಬ್ಯಾಂಕಿಂಗ್ ಉದ್ಯಮ, ಶಿಕ್ಷಣ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತುಂಬಾ ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿದೆ, ಶಿಕ್ಷಣದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ವಿಶ್ವವಿದ್ಯಾನಿಲಯವು ಇನ್ನೂ ಎತ್ತರಕ್ಕೆ ಬೆಳೆದು ದೇಶದಲ್ಲಿ ಒಳ್ಳೆಯ ಮಾದರಿ ಶಿಕ್ಷಣ ಕೇಂದ್ರವಾಗಿ ಬೆಳೆಯಬೇಕು, ವಿದ್ಯಾರ್ಥಿಗಳು ಅತೀವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಒಳಿತನ್ನು ಮಾತ್ರ ತೆಗೆದುಕೊಂಡು ಜೊತೆಗೆ ಶಿಕ್ಷಣದಿಂದ ಜೀವನವನ್ನು ಪ್ರೀತಿಸುವ ಜೀವನದ ಮೌಲ್ಯಗಳನ್ನು ಅಗತ್ಯವಾಗಿ ಕಲಿಯಬೇಕು ಎಂದು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಪ್ರೊ. ಎನ್.ಆರ್.ಶೆಟ್ಟಿ ಸಂಸ್ಥಾಪನಾ ದಿನಾಚರಣೆಯನ್ನು ಉದ್ಧೇಶಿಸಿ ಮಾತನಾಡುತ್ತಾ, ಮಂಗಳೂರು ವಿಶ್ವವಿದ್ಯಾನಿಲಯವು ಶಿಕ್ಷಣಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಓದುವ ವಾತಾವರಣಯನ್ನು ಸುಂದರವಾಗಿ ನಿರ್ಮಿಸಿಕೊಟ್ಟಿದೆ, ಹಾಗಾಗಿ ಕರ್ನಾಟಕದಲ್ಲಿ ಅತ್ಯುನ್ನತ ವಿಶ್ವವಿದ್ಯಾನಿಲಯಗಳಲ್ಲಿ ಇದು ಒಂದೆಂದು ಗುರುತಿಸಿಕೊಂಡಿದೆ, ಇಲ್ಲಿಯ ಶಿಕ್ಷಣ ಜ್ಞಾನವು ದೇಶಕ್ಕೆ ಮಾದರಿ ಆಗಬೇಕು ಎಂದು ನುಡಿದರು.

ಸಾಧಕರಿಗೆ ಸನ್ಮಾನ :

ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ 6 ಜನ ಸಾಧಕರನ್ನು ಸನ್ಮಾನಿಸಲಾಯಿತು. ಸಾವಯುವ ಕೃಷಿ ಮತ್ತು ಭತ್ತದ ವಿವಿಧ ತಳಿಗಳ ರಕ್ಷಣೆ – ಬಿ.ಕೆ. ದೇವರಾಯ , ತುಳು ಭಾಷೆಯ ಜಾನಪದ ತಜ್ಞ – ಡಾ. ಗಣೇಶ ಅಮೀನ್ , ಸಾಮಾಜಿಕ ನ್ಯಾಯ – ಪ್ರೊ.ಶಶಿಕಲಾ ಗುರುಪುರ, ಪತ್ರಿಕೋದ್ಯಮ ಕ್ಷೇತ್ರ – ಜಿ. ಚಿದ್ವೀಲಾಸ್, ಚಲನಚಿತ್ರ ನಿರ್ದೇಶಕ- ಅಭಯಸಿಂಹ, ವಿಜ್ಞಾನಿಗಳು, ಶಿಕ್ಷಣ ತಜ್ಞ – ಪ್ರೊ. ಗೋಪಾಲ್ ಮೋಗೆರಾ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಲಪತಿಗಳಾದ ಪ್ರೊ.ಪಿ.ಎಸ್.ಯಡಪಡಿತ್ತಾಯ ಮಾತನಾಡಿ, ಈ ಹಿಂದೆ ವಿಶ್ವವಿದ್ಯಾನಿಲಯ ವನ್ನು ಸಾಕಷ್ಟು ಶ್ರಮವಹಿಸಿ ಉತ್ತಮ ರೀತಿಯಲ್ಲಿ ಕಟ್ಟಿ ಬೆಳೆಸಿದ್ದಾರೆ, ಅದೇ ರೀತಿಯಲ್ಲಿ ನಾನು ಇವತ್ತಿನ ಕಾಲಕ್ಕೆ ಅನುಗುಣವಾಗಿ ಬದಲಾವಣೆ ಮಾಡಿ ಶಿಕ್ಷಣ ಮತ್ತು ಆಡಳಿತ ಸರಿದೂಗಿಸಿಕೊಂಡು ಮುನ್ನೆಡೆಯಬೇಕಿದೆ, ಹಾಗೂ ಪೇಟೆಂಟ್ ಸೇಲ್‍ಗಳ ಮೂಲಕ ಸಂಶೋಧನಾ ವರದಿಗಳನ್ನು ಪ್ರಕಟಿಸುವ ಕಾರ್ಯವನ್ನು ಪ್ರಾರಂಭಿಸುತ್ತೇನೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು, ಆಡಳಿತ ಅಧಿಕಾರಿಗಳು, ಪ್ರಾಧ್ಯಾಪಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಎ.ಎಂ. ಖಾನ್ ಸ್ವಾಗತಿಸಿದರು ಪ್ರೊ.ಧನಂಜಯ ಕುಂಬ್ಳೆ, ಪ್ರೊ. ರವಿಶಂಕರರ್ ನಿರೂಪಣೆ ಮಾಡಿದರು.

Comments are closed.