ಕರಾವಳಿ

ನಾಳೆಯಿಂದ ಮಂಗಳೂರಿನಲ್ಲಿ ಬೃಹತ್ “ಬ್ಯಾರಿ ಮೇಳ” : ಸಮುದಾಯದ ಪ್ರತಿಭೆಗಳ ಅನಾವರಣ

Pinterest LinkedIn Tumblr

ಮಂಗಳೂರು, ಫೆಬ್ರವರಿ. 07: ಮಂಗಳೂರಿನಲ್ಲಿ ಪ್ರಥಮ ಬಾರಿಗೆ ‘ಬ್ಯಾರಿ ಮೇಳ’ವನ್ನು ಆಯೋಜಿಸಲಾಗಿದ್ದು, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರಿ ವತಿಯಿಂದ ಫೆ. 8ರಿಂದ 10ರವರೆಗೆ ನಗರದ ಪುರಭವನದಲ್ಲಿ ‘ಬ್ಯಾರಿ ಮೇಳ’ ನಡೆಯಲಿದೆ.

ಬಿಸಿಸಿಐ ಅಧ್ಯಕ್ಷರಾದ ಎಸ್.ಎಂ ರಶೀದ್ ಹಾಜಿಯವರ ನೇತ್ರತ್ವದಲ್ಲಿ ನಡೆಯಲಿರುವ ಈ ಬೃಹತ್ ‘ಬ್ಯಾರಿ ಮೇಳ’ವನ್ನು ಫೆ. 8ರಂದು ಸಂಜೆ 5ಕ್ಕೆ ಗೃಹ ಸಚಿವ ಎಂ.ಬಿ. ಪಾಟೀಲ್ ಉದ್ಘಾಟಿಸಲಿರುವರು. ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ವಸ್ತುಪ್ರದರ್ಶನವನ್ನು ಯೆನೆಪೋಯ ವಿಶ್ವವಿದ್ಯಾಲಯ ಕುಲಪತಿ ವೈ. ಅಬ್ದುಲ್ಲ ಕುಂಞಿ ಉದ್ಘಾಟಿಸುವರು.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಮೇಯರ್ ಭಾಸ್ಕರ ಕೆ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಬ್ಯಾರಿ ಮೇಳ ಸಂಚಾಲಕ ಹಾಜಿ ಮನ್ಸೂರ್ ಅಹಮ್ಮದ್ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಬಿಎ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ. ಬಿ. ಅಹ್ಮದ್ ಮೊಹಿಯುದ್ದೀನ್ ಅವರಿಗೆ ಬಿಸಿಸಿಐ ಜೀವಮಾನ ಸಾಧನಾ ಪ್ರಶಸ್ತಿ, ಕಣ್ಣೂರು ವಿವಿ ಮಾಜಿ ಕುಲಪತಿ ಡಾ. ಎಂ. ಅಬ್ದುಲ್ ರಹಿಮಾನ್ ಅವರಿಗೆ ಬಿಸಿಸಿಐ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್, ಕೆ.ಎಸ್. ಶೇಖ್ ಕರ್ನಿರೆ ಅವರಿಗೆ ಬಿಸಿಸಿಐ ಎನ್‌ಆರ್‌ಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್, ಎ.ಕೆ. ಗ್ರೂಪ್ ಆಫ್ ಕಂಪೆನೀಸ್ ಸ್ಥಾಪಕಾಧ್ಯಕ್ಷ ಎಂ. ಅಹ್ಮದ್ ಅವರಿಗೆ ಬಿಸಿಸಿಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಲಾಗುವುದು.

ಫೆ. 8ರಂದು ಸಂಜೆ 5ರಿಂದ ರಾತ್ರಿ 9ರವರೆಗೆ, ಫೆ. 9 ಮತ್ತು 10ರಂದು ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಮೇಳ ನಡೆಯಲಿದೆ. ಫೆ. 9ರಂದು ಸಂಜೆ 4.30ರಿಂದ 7ರವರೆಗೆ ಪ್ರತಿಭಾ ಪ್ರದರ್ಶನ ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಫೆ. 10ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ದೇಶ ವಿದೇಶಗಳ ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮ, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಾಣಿಜ್ಯೋದ್ಯಮ, ಬ್ಯಾರಿ ಸಂಸ್ಕೃತಿ, ವ್ಯಾಪಾರವನ್ನು ಪ್ರೋತ್ಸಾಹಿಸುವುದು, ಅವಕಾಶ ಸೃಷ್ಟಿಸಿ ಮೇಳದ ಉದ್ದೇಶ. ವಸ್ತುಪ್ರದರ್ಶನ, ವಿವಿಧ ಮಳಿಗೆ, ಆಹಾರ ಮಳಿಗೆ ಇರಲಿದೆ ಎಂದು ಮನ್ಸೂರ್ ಅವರು ಮೇಳದ ಕುರಿತು ವಿವರ ನೀಡಿದ್ದಾರೆ.

ನಮ್ಮ ಸಮುದಾಯದ ಪ್ರತಿಭೆಗಳನ್ನು ಗುರುತಿಸಲು ಬ್ಯಾರಿ ಮೇಳ : ಅಲ್ ಹಾಜಿ ಎಸ್.ಎಂ.ರಶೀದ್

ಬ್ಯಾರಿ ಮೇಳ ಹಾಗೂ ಬ್ಯಾರೀಸ್ ಗಾಟ್ ಟ್ಯಾಲೆಂಟ್ ಎಂಬ ಕಾರ್ಯಕ್ರಮವನ್ನು ಪುರಭವನದಲ್ಲಿ ನಾವು ಫೆಬ್ರವರಿ 8ರಿಂದ 10ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದೇವೆ. ನಮ್ಮ ಸಮುದಾಯದಲ್ಲಿ ಹಲವಾರು ಪ್ರತಿಭೆಗಳು ಇವೆ. ಆದರೆ ಈ ಪ್ರತಿಭೆಗಳನ್ನು ಗುರುತಿಸುವಲ್ಲಿ ಸಮುದಾಯ ವಿಫಲವಾಗುತ್ತಿದೆ. ಹಳ್ಳಿ ಪ್ರದೇಶಗಳಲ್ಲಂತೂ ಯಥೇಚ್ಛವಾಗಿ ಪ್ರತಿಭೆಗಳು ಕಾಣ ಸಿಗುತ್ತವೆ. ಇವರನ್ನು ಮೇಲೆತ್ತುವುದು ನಮ್ಮ ಕರ್ತವ್ಯ ಮಾತ್ರವಲ್ಲದೇ ಬ್ಯಾರಿ ಸಾಮುದಾಯಿಕ ಸಮ್ಮಿಲನ ಎಂದು ಕೂಡಾ ಈ ಕಾರ್ಯಕ್ರಮವನ್ನು ಕರೆಯಬಹುದಾಗಿದೆ.

ಕಾರ್ಯಕ್ರಮದಲ್ಲಿ ಹಲವಾರು ಮಂದಿ ಅನಿವಾಸಿ ಉದ್ಯಮಿಗಳು, ಸಚಿವರು, ಸಾಧಕರು ಭಾಗವಹಿಸಲಿದ್ದಾರೆ. ಬ್ಯಾರಿಗಳ ಉದ್ಯಮಶೀಲತೆಯನ್ನು ಬಿಂಬಿಸುವ ಮಳಿಗೆಗಳ ಪ್ರದರ್ಶನವೂ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 9ರವರೆಗೆ ಬ್ಯಾರಿ ಸಂಪ್ರದಾಯವನ್ನು ಬಿಂಬಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷರಾದ ಎಸ್.ಎಂ ರಶೀದ್ ಹಾಜಿ ತಿಳಿಸಿದ್ದಾರೆ.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಕೆಲವು ವರ್ಷಗಳಿಂದ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಕಾರ್ಯಾಚರಣೆ ಮಾಡುತ್ತಿದ್ದು, ಬ್ಯಾರೀ ಸಮುದಾಯದಲ್ಲಿನ ಉದ್ಯಮಿಗಳನ್ನು ಹಾಗೂ ಆಸುಪಾಸಿನ ಹಲವಾರು ಉದ್ಯಮಿಗಳನ್ನು ಒಂದೇ ಸೂರಿಡಿಯಲ್ಲಿ ತರುವ ಪ್ರಯತ್ನವನ್ನು ಮಾಡುತ್ತಿದೆ ಮತ್ತು ಈ ಕಾರ್ಯದಲ್ಲಿ ಭಾಗಶಃ ಯಶಸ್ಸನ್ನೂ ಕಂಡಿದೆ. ಕೇವಲ ಉದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸುತ್ತಿರುವ ಬಿಸಿಸಿಐ ಮಂಗಳೂರಿನ ಪುರಭವನದಲ್ಲಿ ಬ್ಯಾರೀ ಮೇಳ ಹಾಗೂ ಬ್ಯಾರೀಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರಶೀದ್ ಹಾಜಿಯವರು ಹೇಳಿದ್ದಾರೆ.

ಈ ವೇಳೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಮ್ತಿಯಾಜ್, ಕಾರ್ಯದರ್ಶಿ ನಿಸಾರ್ ಅಹಮ್ಮದ್, ಕಾರ್ಯಕಾರಿ ಸಮಿತಿ ಸದಸ್ಯ ಎ.ಕೆ. ನಿಯಾಝ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಉದ್ಯಮಿ ಅಲ್ ಹಾಜಿ ಪಿಪಿ ಮಜೀದ್ ಸೇರಿದಂತೆ ಹಲವಾರು ಗಣ್ಯರು ಶುಭಾ ಕೋರಿದ್ದಾರೆ.

Comments are closed.