ಕರಾವಳಿ

ಉಳ್ಳಾಲದಲ್ಲಿ ಯುವಕನೋರ್ವನ ಶವ ಪತ್ತೆ : ಕಟ್ಟಡದಿಂದ ಬಿದ್ದು ಸಾವು ಶಂಕೆ!

Pinterest LinkedIn Tumblr

ಉಳ್ಳಾಲ, ಫೆಬ್ರವರಿ.07: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪಿಕಾಡ್ ಎಂಬಲ್ಲಿ ಯುವಕನೋರ್ವ ಕಟ್ಟಡದಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವ್ಯಕ್ತಿಯನ್ನು ಉಳ್ಳಾಲ ತೊಕ್ಕೊಟ್ಟು ಸಮೀಪದ ಅಂಬಿಕಾ ರೋಡ್ ನಿವಾಸಿ ರಿಕ್ಷಾ ಚಾಲಕ ವಿಜಯ್ ಎಂಬವರ ಪುತ್ರ ನಿಶಾನ್ (26) ಎಂದು ಗುರುತಿಸಲಾಗಿದೆ.

ಉಳ್ಳಾಲ ಕಾಪಿಕಾಡ್‌ನ ಭಗವತಿ ಕಾಂಪ್ಲೆಕ್ಸ್‌ನ ಪಕ್ಕದ ಮನೆಯೊಂದರ ಅಂಗಳದಲ್ಲಿ ನಿಶಾನ್ ಅವರ ಮೃತದೇಹ ಪತ್ತೆಯಾಗಿದ್ದು, ಭಗವತಿ ಕ್ಲಾಂಪ್ಲೆಕ್ಸ್ ಕಟ್ಟಡದಿಂದ ಬಿದ್ದು ನಿಶಾನ್ ಮೃತಪಟ್ಟಿರ ಬೇಕೆಂದು ಶಂಕಿಸಲಾಗಿದೆ.

ಮೃತದೇಹದ ಕೈಯೊಂದು ಮುರಿದಿದ್ದರೆ, ತಲೆ ಸೇರಿದಂತೆ ಬೇರೆಲ್ಲೂ ಗಂಭೀರ ಗಾಯಗಳು ಗೋಚರಿಸುತ್ತಿಲ್ಲ. ಇವರ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಿಶಾನ್ ಮಾದಕ ವ್ಯಸನಿಯಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ಮುಂದುವರಿದಿದೆ.

Comments are closed.