ಕುಂದಾಪುರ: ಗಾರೆ ಕೆಲಸ ಮಾಡುತ್ತಿದ್ದ ಮೇಸ್ತ್ರಿಯೋರ್ವರು ದೇವಸ್ಥಾನ ಕೆರೆಗೆ ಬಿದ್ದು ಮುಳುಗಿ ಮೃತಪಟ್ಟ ಘಟನೆ ನಡೆದಿದ್ದು ಮಂಗಳವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಕೋಟೆಶ್ವರ ದೊಡ್ಡೋಣಿ ನಿವಾಸಿ ರಾಘವೇಂದ್ರ ದೇವಾಡಿಗ (47) ಸಾವನ್ನಪ್ಪಿದವರು.
ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿ ಬಳಿಯಲ್ಲಿ ಗಣಪತಿ ವಿಸರ್ಜನೆ ಸಲುವಾಗಿ ಚಿಕ್ಕದೊಂದು ಕೆರೆಯನ್ನು ನಿರ್ಮಿಸಲಾಗಿತ್ತು.ಆ ಕೆರೆಯಲ್ಲಿ ಇಂದು ಬೆಳೆಗ್ಗಿನ ಜಾವ ವ್ಯಕ್ತಿಯೋರ್ವರ ತಲೆ ಕಂಡಿದ್ದು ಭಾಗ ಕೂಡಲೇ ಜಮಾಯಿಸಿದ ಸ್ಥಳೀಯರು ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವ ಮೇಲಕ್ಕೆತ್ತಿ ಪರಿಶೀಲನೆ ನಡೆಸಿದ್ದು ಅದು ಸಮೀಪದ ದೊಡ್ಡೋಣಿ ನಿವಾಸಿ ರಾಘವೆಂದ್ರ ಅವರದ್ದೆಂದು ತಿಳಿದುಬಂದಿದೆ.
ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಧರಿಸಿದ್ದ ಚಪ್ಪಲಿ ಕೆರೆಯ ದಂಡೆಯಲ್ಲಿ ಪತ್ತೆಯಾಗಿದೆ. ನಿತ್ಯ ಬೆಳಿಗ್ಗೆ ವಾಕಿಂಗ್ ಹೋಗುವ ಪರಿಪಾಠ ಹೊಂದಿದ್ದ ಇವರು ಕಾಲು ತೊಳೆಯಲು ಕೆರೆಗೆ ಇಳಿದಿದ್ದು ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಇನ್ನು ಮೃತ ರಾಘವೇಂದ್ರ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರು ಮನೆ ಕಟ್ಟುವ ಸಲುವಾಗಿ ತಳಪಾಯ ಹಾಕಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರದ ಎಸ್.ಎಸ್. ಐ. ಸುಧಾಕರ್, ಪಾಂಡುರಂಗ ನಾಯ್ಕ್, ಸಿಬ್ಬಂದಿಗಳಾದ ವೆಂಕಟರಮಣ, ಪ್ರಸನ್ನ ಆಗಮಿಸಿದ್ದು ಪ್ರಕರಣ ದಾಖಲಾಗಿದೆ.
Comments are closed.