ಕರಾವಳಿ

ಟೋಲ್ ಸಮಸ್ಯೆಗಾಗಿ ಕೋಟ ಬಂದ್ ಯಶಸ್ವಿ: ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಟೋಲ್ ಸಂಗ್ರಹವಿಲ್ಲ: MP, MLA ಬಂಧನ

Pinterest LinkedIn Tumblr

ಉಡುಪಿ: ಶುಕ್ರವಾರ ಉಡುಪಿ ಜಿಲ್ಲೆಯ ಸಾಸ್ತಾನದ ಟೋಲ್ ಕೇಂದ್ರದ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಕರೆ ಕೊಟ್ಟ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕೋಟದಿಂದ ಮಾಬುಕಳದ ತನಕ ಸಂಪೂರ್ಣ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

140ಕ್ಕೂ ಮಿಕ್ಕಿ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಟೋಲ್ ವಿನಾಯಿತಿ ನೀಡುವುದರ ಜತೆಗೆ ಅಪೂರ್ಣ ಕಾಮಗಾರಿಗಳನ್ನು ಕೂಡಲೇ ಮಾಡಬೇಕೆಂದು ಆಗ್ರಹಿಸಿದರು. ದೂರದ ಬೈಂದೂರು, ನಾವುಂದ, ಉಡುಪಿ ಹಾಗೂ ಕೋಟದಿಂದ ಮಾಬುಕಳದ ತನಕ ಬಂದ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಬದಿಯಲಿಟ್ಟು, ಸಾಸ್ತಾನ ಗುಂಡ್ಮಿ ಟೋಲ್ ಕೇಂದ್ರದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು. ಪ್ರತಿಭಟನಾ ಸಭೆ ಪ್ರಾರಂಭಗೊಳ್ಳುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಪಡೆದ ನವಯುಗ ಕಂಪೆನಿ ವಿರುದ್ದ ಪ್ರತಿಭಟನಾ ನಿರತರು ಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಕೇಮಾರು ಸಾಂದಿಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಟೋಲ್ ಮುಕ್ತ ಜಿಲ್ಲೆಯಾಗಬೇಕು. ಟೋಲ್ ಮುಕ್ತ ಜಿಲ್ಲೆಯಾಗಬೇಕಾದರೆ ನಿಮ್ಮೆಲ್ಲರ ಪರಿಶ್ರಮ ಮುಖ್ಯವಾಗಿ ಬೇಕು. ಜನಪ್ರತಿನಿಗಳ ಮಾತನ್ನೂ ಮೀರಿ ಜಿಲ್ಲಾಡಳಿತ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಹಂಗಾರಕಟ್ಟೆ ಬಾಳ್ಕುದ್ರು ಮಠದ ಮಠಾಶರಾದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಮಾತನಾಡಿ, ಇದುವರೆಗೆ ಮುಕ್ತವಾಗಿ ನಾವು ಓಡಾಡುತ್ತಿದ್ದೇವೆ. ಆದರೆ ಈಗ ಮನೆಯಿಂದ ಹೊರಬರಬೇಕಾದರೆ ಟೋಲ್ ಕಟ್ಟುವ ಪರಿಸ್ಥಿತಿ ಉಂಟಾಗಿದೆ. ಟೋಲ್ ಹೆಸರಿನಲ್ಲಿ ನವಯುಗ ಕಂಪೆನಿ ದೌರ್ಜನ್ಯ ನಡೆಸುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಯಶಸ್ಸು ಖಂಡಿತ ಸಿಗಲಿದೆ ಎಂದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಟೋಲ್ ಪಡೆಯಲೇಡಿ ಎಂದು ನಾವು ಹೇಳುತ್ತಿಲ್ಲ. ಒಪ್ಪಂದದ ಪ್ರಕಾರ ಟೋಲ್ ಪಡೆಯಲೇಬೇಕು. ಆದರೆ ಸ್ಥಳೀಯರಿಗೆ ವಿನಾಯಿತಿ ಕೊಡಿ ಎನ್ನುವುದು ನಮ್ಮ ವಾದ. ಗುತ್ತಿಗೆ ಕಂಪೆನಿಯವರು ಸಭೆಗೆ ಬರಲು ಮೀನಾಮೇಷ ಎಣಿಸುತ್ತಿದ್ದಾರೆಂದು ಜಿಲ್ಲಾಡಳಿತದ ಮೂಲಗಳಿಂದ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಸ್ಥಳೀಯರು ಕರ ನಿರಾಕರಣೆ ಚಳವಳಿ ಆರಂಭಿಸಿದರೆ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಇಡೀ ಜಿಲ್ಲೆಯ ಎಲ್ಲಾ ಶಾಸಕರು ಆ ಚಳವಳಿಯಲ್ಲಿ ಭಾಗವಹಿಸುತ್ತಾರೆ ಎಂದರು.

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ೨೦೧೩ ರಲ್ಲಿ ಮುಗಿಯಬೇಕಾದ ಕಾಮಗಾರಿ ಇನ್ನೂ ಮುಗಿದಿಲ್ಲ. ಕುಂದಾಪುರ, ಪಡುಬಿದ್ರಿಯ ಪರಿಸರದಲ್ಲಿ ಇನ್ನೂ ಹೆಚ್ಚಿನ ಕಾಮಗಾರಿ ಬಾಕಿ ಇದೆ. ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ಸಂಗ್ರಹಿಸಿದಂತೆ ಈಗಾಗಲೇ ಹಲವು ಬಾರಿ ಜಿಲ್ಲಾಧಿಕಾರಿಗಳ ಮೂಲಕ ಕಂಪೆನಿಗೆ ಸೂಚನೆ ನೀಡಿದರೂ ಕಂಪೆನಿ ಸ್ಪಂದಿಸುತ್ತಿಲ್ಲ ಎಂದರು.

ಉಡುಪಿ ಶಾಸಕ ಕೆ. ರಘುಪತಿ ಭಟ್, ಲಾರಿ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜೇಶ ಕಾವೇರಿ, ಸಾಸ್ತಾನ ಸಂತ ಅಂಥೋನಿ ಚರ್ಚ್‌ನ ಧರ್ಮಗುರು ವಂ.ಫಾ.ಜಾನ್ ವಾಲ್ಟರ್ ಮೆಂಡೋನ್ಸಾ, ಸಾಸ್ತಾನ ಗುಂಡ್ಮಿ ಜುಮ್ಮಾ ಮಸೀದಿಯ ಮೌಲ್ವಿ ಇರ್ಫಾನ್ ಆಲಂ,ಕಾಪು ಶಾಸಕ ಲಾಲಾಜಿ ಮೆಂಡನ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು,ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ ಶೆಟ್ಟಿ ಮೊದಲಾದವರು ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ದೇವಿಪ್ರಸಾದ್ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ ಶೆಟ್ಟಿ, ಕಾರ್ಯದರ್ಶಿ ವಿಠಲ ಪೂಜಾರಿ, ಜಿಲ್ಲಾ ಜೆಡಿ‌ಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಐರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಸೆಸ್ ರೋಡಿಗ್ರಸ್, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಾಲಿಗ್ರಾಮ ಸತೀಶ್ ಪೂಜಾರಿ, ಪಾಂಡೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಕಾಂಚನ್ ಬಾರಿಕೆರೆ, ಶ್ರೀಲತಾ ಸುರೇಶ್ ಶೇಟ್ಟಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರಾದ ಶ್ಯಾಮ್ ಸುಂದರ್ ನಾರಿ, ಪ್ರಶಾಂತ ಶೆಟ್ಟಿ,ಅಲ್ವಿನ್ ಅಂದ್ರಾದೆ, ಸಾಲಿಗ್ರಾಮ ನಾಗರಾಜ ಗಾಣಿಗ, ಚಂದ್ರ ಮೋಹನ್, ಕಾರ್ಕಡ ರಾಜು ಪೂಜಾರಿ, ಸಂಜೀವ ದೇವಾಡಿಗ, ಕಾರ್ಕಡ ಅಚ್ಯುತ ಪೂಜಾರಿ,ಕೋಟ ದಿನೇಶ್ ಗಾಣಿಗ,ರಾಘವೇಂದ್ರ ಐರೋಡಿ,ಸಂದೀಪ್ ಕುಂದರ್ ಕೋಡಿ,ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ಮೊದಲಾದವರು ಉಪಸ್ಥಿತರಿದ್ದರು.

ಸಂಸದೆ, ಶಾಸಕ ವಶಕ್ಕೆ..!
ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ವಿರೋಧಿಸಿ ಶುಕ್ರವಾರ ನಡೆದ ಕೋಟ ಬಂದ್ ಯಶಸ್ವಿಯಾಗಿದ್ದು ಮಾತ್ರವಲ್ಲದೇ ಪ್ರತಿಭಟನೆಗೆ ಪೂರಕವಾದ ಯಶಸ್ಸು ಸಿಕ್ಕಿದೆ. ಕೋಟ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಖಾಸಗಿ ವಾಹನಗಳಿಗೆ ಉಚಿತ ಪ್ರವೇಶ ನೀಡುವ ಮೂಲಕ ಜಿಲ್ಲಾಡಳಿತ ಶುಕ್ರವಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ.

ಕೋಟ ಜಿಲ್ಲಾಪಂಚಾಯತ್ ವ್ಯಾಪ್ತಿಯ ಕರಿಕಲ್ ಕಟ್ಟೆಯಿಂದ ಮಾಬುಕಳವರೆಗಿನವರಿಗೆ ಟೋಲ್ ಸಂಗ್ರಹ ಇಲ್ಲ ಹಾಗೂ ಸ್ಥಳೀಯ ಟೂರಿಸ್ಟ್ ವಾಹನಗಳಿಗೂ ಉಚಿತ ಪ್ರವೇಶದ ಭರವಸೆ ಸಿಕ್ಕಿದ್ದು ಈ ಬಗ್ಗೆ ಪ್ರತಿಭಟನಾಕಾರರಿಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭರವಸೆ ನೀಡಿದ್ದಾರೆಂದು ಖುದ್ದು ಸಂಸದೆ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕರು ಪ್ರತಿಭಟನಾ ನಿರತರ ಬಳಿ ಸಂಜೆ ಸುಮಾರಿಗೆ ಬ್ಂದು ತಿಳಿಸಿದ್ದಾರೆ. ಆದರೆ ಪ್ರತಿಭಟನಾಕಾರರ ಮುಖ್ಯ ಬೇಡಿಕೆಗಳಲ್ಲಿ ಇನ್ನೊಂದಾದ ಜಿಲ್ಲೆಯ ಎಲ್ಲಾ ಟ್ಯಾಕ್ಸಿ ವಾಹನಗಳಿಗೂ ಉಚಿತ ಪ್ರವೇಶ ನೀಡಬೇಕೆಂಬ ಆಗ್ರಹ ಈಡೇರಿಲ್ಲ. ಈ ವೇಳೆ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹಾಗೂ ಡಿವೈಎಸ್ಪಿ ಟಿ. ಜಯಶಂಕರ್ ಜೊತೆ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್ ಸ್ಥಳದಲ್ಲೇ ಕೆಲ ಕಾಲ ಮಾತುಕತೆ ನಡೆಸಿದ್ದು ಸಂಪೂರ್ಣ ಬೇಡಿಕೆ ಈಡೇರಿಕೆಗಾಗಿ ರಸ್ತೆಯಲ್ಲಿ ಕುಳಿತು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಲ್ಲದೇ ಅಷ್ಟು ಪ್ರತಿಭಟನಾಕಾರ ಜೊತೆ ಶಾಸಕ ರಘುಪತಿ ಭಟ್, ಸಂಸದೆ ಶೋಭಾ ಹೆದ್ದಾರಿಗಿಳಿದಿದ್ದು ಕೂಡಲೇ ಪೊಲೀಸರು ಸಂಸದೆ, ಶಾಸಕ ಸಮೇತ ಸುಮಾರು ೬೨ ಮಂದಿ ಪ್ರತಿಭಟನಾ ನಿರತರನ್ನು ಬಂಧಿಸಿ ಬಿಡುಗಡೆಗೊಳಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.