ಬೆಂಗಳೂರು: ಸ್ನಾನದ ಮನೆಯಲ್ಲಿ ನಗದು ಮತ್ತು ಚಿನ್ನ ಬಚ್ಚಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಳ್ಳಕೆರೆಯ ಹವಾಲ ಏಜೆಂಟ್, ಸ್ಥಳೀಯ ಜೆಡಿಎಸ್ ಮುಖಂಡ ಕೆ.ಸಿ. ವೀರೇಂದ್ರ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ, ಎಸ್ಬಿಐ ಮತ್ತು ಎಸ್ಬಿಎಂ ಅಧಿಕಾರಿಗಳ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.
ವೀರೇಂದ್ರ ಅವರ ಮನೆ ಮತ್ತು ಗೋವಾದಲ್ಲಿರುವ ಅವರ ಮಾಲೀಕತ್ವದ ಕ್ಯಾಸಿನೊ ಸೇರಿದಂತೆ 15ಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆಯ ಅಧಿಕಾರಿಗಳು ಇದೇ 10ರಂದು ಶನಿವಾರ ದಾಳಿ ನಡೆಸಿದ್ದರು.
ದಾಳಿ ಸಂದರ್ಭದಲ್ಲಿ ವೀರೇಂದ್ರ ಅವರ ಸ್ನಾನದ ಮನೆಯಿಂದ ₹ 2 ಸಾವಿರ ಮುಖಬೆಲೆಯ ₹ 5.7 ಕೋಟಿ, 28 ಕೆ.ಜಿ ಚಿನ್ನದ ಬಿಸ್ಕತ್, 4 ಕೆ.ಜಿ ಚಿನ್ನಾಭರಣ, ₹ 100 ಮತ್ತು ₹ 20ರ ಮುಖಬೆಲೆಯ ₹ 90 ಲಕ್ಷ ನಗದು ವಶಕ್ಕೆ ಪಡೆಯಲಾಗಿತ್ತು.
ಈ ಲಾಕರ್ ಕಾಣದಂತೆ ಅದರ ಮೇಲೆ ಟೈಲ್ಸ್ ಅಳವಡಿಸಲಾಗಿತ್ತು. ರಹಸ್ಯ ಮಾಹಿತಿ ಆಧರಿಸಿ ಐಟಿ ಅಧಿಕಾರಿಗಳು ಈ ದಾಳಿ ನಡೆಸಿದ್ದರು. ಕೆಲ ಬ್ಯಾಂಕ್ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಜೊತೆ ಸೇರಿ ವೀರೇಂದ್ರ ಅವರು ಹಳೆ ನೋಟುಗಳನ್ನು ಬದಲಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ.
ವೀರೇಂದ್ರ ಅವರ ಸಹೋದರರಾದ ಕೆ.ಸಿ. ತಿಪ್ಪೇಸ್ವಾಮಿ ಮತ್ತು ಕೆ.ಸಿ. ನಾಗರಾಜ ಅವರ ಮನೆಗಳ ಮೇಲೂ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಪಿಎಲ್ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆಗಿರುವ ವೀರೇಂದ್ರ ಅವರು ಇತ್ತೀಚೆಗೆ ಕ್ಯಾಸಿನೊ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂದೆಯಲ್ಲಿ ತೊಡಗಿಸಿಕೊಂಡಿದ್ದರು.