ಕರ್ನಾಟಕ

ರಾಜ್ಯದ ಪ್ರಮುಖ ದೇವಾಲಯಗಳ ಹುಂಡಿಯಲ್ಲಿ ತುಂಬಿ ತುಳುಕುತ್ತಿವೆ ಹಳೇಯ 500 ಮತ್ತು 1000 ರು ನೋಟುಗಳು !

Pinterest LinkedIn Tumblr

32

ಬೆಂಗಳೂರು: 500 ಮತ್ತು 1000 ರು ನೋಟು ನಿಷೇಧದ ನಂತರ ರಾಜ್ಯದ ಪ್ರಮುಖ ದೇವಾಲಯಗಳ ಹುಂಡಿಯಲ್ಲಿ ಹಳೇಯ 500 ಮತ್ತು 1000 ರು ನೋಟುಗಳು ತುಂಬಿ ತುಳುಕುತ್ತಿವೆ.

ಹಳೇಯ ನೋಟುಗಳನ್ನು ಕೂಡಲೇ ಬ್ಯಾಂಕ್ ಗಳಿಗೆ ತಂದು ಡಿಪಾಸಿಟ್ ಮಾಡುವಂತೆ ಮುಜರಾಯಿ ಇಲಾಖೆ ದೇವಾಲಯಗಳಿಗೆ ಸುತ್ತೊಲೆ ಹೊರಡಿಸಿದೆ. ಸುಮಾರು 34 ಸಾವಿರ ದೇವಾಸ್ಥಾನಗಳು ಮುಜಾರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತವೆ. ಇದರಲ್ಲಿ ಸುಮಾರು 175 ದೇವಾಲಯಗಳ ವಾರ್ಷಿಕ ಆದಾಯ 25 ಲಕ್ಷ, 158 ದೇವಾಲಯಗಳು ಬಿ ಕೆಟಗರಿಯಲ್ಲಿ ಬರುತ್ತವೆ. ಇವರುಗಳ ವಾರ್ಷಿಕ ಆದಾಯ 5 ರಿಂದ 25 ಲಕ್ಷವಿರುತ್ತದೆ. ಉಳಿದ ಎಲ್ಲಾ ದೇವಾಲಯಗಳು ಸಿ ಕೆಟಗರಿಯಲ್ಲಿ ಬರುತ್ತವೆ. ಇವುಗಳ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುತ್ತದೆ.

ಕಳೆದ 15 ದಿನಗಳಲ್ಲಿ ನಮ್ಮ ಇಲಾಖೆಗೆ ಸೇರಿದ ದೇವಾಲಯಗಳ ಆದಾಯ ಭಾರೀ ಹೆಚ್ಚಿದೆ. ನೋಟು ನಿಷೇದ ಮಾಡಿರುವ ಹಿನ್ನೆಲೆಯಲ್ಲಿ ದೇವಾಲಯದ ಹುಂಡಿಗಳಲ್ಲಿ ಗಣನೀಯ ಪ್ರಮಾಣದ ಹಣ ಸಂಗ್ರಹವಾಗಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಕಳೆದ ಗುರುವಾರ ಬನಶಂಕರಿ ದೇವಾಲಯದ ಹುಂಡಿ ತೆರೆದಾಗ ಅದರಲ್ಲಿ 56 ಲಕ್ಷ ರು ಹಣ ಸಂಗ್ರಹವಾಗಿತ್ತು. ಅದರಲ್ಲಿ ಸುಮಾರು 20 ಲಕ್ಷ ರು ಹಣ ನಿಷೇಧಿತ ನೋಟುಗಳಾಗಿವೆ. ಇಷ್ಟು ವರ್ಷಗಳಲ್ಲಿ 40 ಲಕ್ಷಕ್ಕಿಂತ ಹೆಚ್ಚಿನ ಹಣ ಸಂಗ್ರಹವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹಣ ಸಂಗ್ರಹವಾಗಿದೆ ಎಂದು ಬನಶಂಕರಿ ದೇವಾಲಯದ ದತ್ತಿ ಅಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.

ಮುಜರಾಯಿ ಇಲಾಖೆಗೆ ಅತಿ ಹೆಚ್ಚು ಆದಾಯ ತಂದು ಕೊಡುವ ಕುಕ್ಕೆ ಸುಬ್ರಮಣ್ಯ ದೇವಾಲಯದ ವಾರ್ಷಿಕ ಆದಾಯ 4.25 ಕೋಟಿ ರು. ಜೊತೆಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿರುವ ಶ್ರೀಕಂಠೇಶ್ವರ ದೇವಾಲಯ, ಬೆಳಗಾವಿಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಾಸ್ಥಾನ ಗಳ ವಾರ್ಷಿಕ ಆದಾಯ ಸುಮಾರು 3.5 ಕೋಟಿಯಿಂದ 4 ಕೋಟಿ ರು ಇರುತ್ತದೆ.

ಹುಂಡಿಗಳಲ್ಲಿ ಸಂಗ್ರಹವಾದ ಹಣವನ್ನು ಬ್ಯಾಂಕ್ ಗಳಿಗೆ ಡೆಪಾಸಿಟ್ ಮಾಡುವಂತೆ ಕೇಂದ್ರ ಹಣಕಾಸು ಇಲಾಖೆ ಸೂಚಿಸಿದೆ, ಅದರಂತೆ ನಾವು ಪ್ರತಿ ನಿತ್ಯ ಹಣವನ್ನು ಬ್ಯಾಂಕ್ ಗೆ ಕಟ್ಟುತ್ತಿದ್ದೇವೆ, ಆದರೆ ಭಕ್ತರು ಮತ್ತೆ ಮತ್ತೆ ಹಳೇಯ ನೋಟುಗಳನ್ನು ಹುಂಡಿಗೆ ಹಾಕುತ್ತಿದ್ದಾರೆ. ಹಳೇಯ ನೋಟುಗಳನ್ನು ಹುಂಡಿಗೆ ಹಾಕಬೇಡಿ ಎಂದು ಹೇಳಲು ಸಾಧ್ಯವಿಲ್ಲ, ಹೀಗಾಗಿ ನಾವು ಪ್ರತಿದಿನ ಹುಂಡಿ ತೆರೆದು ಹಳೇಯ ನೋಟುಗಳನ್ನು ಬ್ಯಾಂಕ್ ಗೆ ನೀಡುತ್ತಿದ್ದೇವೆ ಎಂದು, ಮುಜರಾಯಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ತಿಳಿಸಿದ್ದಾರೆ.

Comments are closed.