ರಾಷ್ಟ್ರೀಯ

ಅಫ್ಜಲ್‌ ಗುರು ಸಾವಿನ ಪ್ರತೀಕಾರಕ್ಕಾಗಿ ಸೇನಾ ಶಿಬಿರಗಳ ಮೇಲೆ ದಾಳಿ

Pinterest LinkedIn Tumblr

ಜಮ್ಮು: ನಗರದ ಹೊರಭಾಗದ ಸುಂಜ್‌ವಾನ್‌ ಸೇನಾ ಶಿಬಿರದ ಮೇಲೆ ಜೈಷೆ ಮೊಹಮ್ಮದ್‌ ಉಗ್ರರು ಶನಿವಾರ ನಡೆಸಿದ ದಾಳಿಯು ಸಂಸತ್‌ ಭವನದ ಮೇಲೆ ದಾಳಿಯ ಸಂಚುಕೋರ ಅಫ್ಜಲ್‌ ಗುರುವಿನ ಸಾವಿಗೆ ಪ್ರತೀಕಾರ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿದ ದಿನವಾದ ಫೆ.9ರಂದು ಜೈಷೆ ಉಗ್ರರು ದಾಳಿ ನಡೆಸಬಹುದೆಂದು ಗುಪ್ತಚರ ಇಲಾಖೆ ಈ ಮುನ್ನವೇ ಸುಳಿವು ನೀಡಿತ್ತು. ಆದರೂ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಉಗ್ರ ಅಫ್ಜಲ್‌ ಗುರುವನ್ನು 2013ರ ಫೆ.9ರಂದು ದಿಲ್ಲಿಯ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

ಹಿಂಭಾಗದಿಂದ ಪ್ರವೇಶ:

ಉಗ್ರರು ಹಿಂಭಾಗದಿಂದ ಸೇನಾ ಶಿಬಿರವನ್ನು ಪ್ರವೇಶಿಸಿದ್ದಾರೆ. ಪರಸ್ಪರ ಪ್ರತ್ಯೇಕಗೊಂಡು ಶಿಬಿರದೊಳಗೆ ನುಗ್ಗಿ ಬಂದಿದ್ದಾರೆ. ಕ್ವಾರ್ಟರ್ಸ್‌ನಲ್ಲಿ ಸೇನಾ ಸಿಬ್ಬಂದಿಯ ಕುಟುಂಬಗಳು ವಾಸವಿದ್ದ ಹಿನ್ನೆಲೆಯಲ್ಲಿ, ಎಚ್ಚರಿಕೆಯಿಂದ ಗುಂಡು ಹಾರಿಸಲಾಯಿತು. ಕುಟುಂಬ ಸದಸ್ಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ, ಗುಂಡಿನ ದಾಳಿ ತೀವ್ರಗೊಳಿಸಲಾಯಿತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 4.30ರ ಸುಮಾರಿಗೆ ಗುಂಡಿನ ದಾಳಿಯ ಸದ್ದು ಕೇಳಿಸಿದಾಗ ಕ್ವಾರ್ಟರ್ಸ್‌ ಒಳಗಿದ್ದ ನಿವಾಸಿಗಳು, ಸೇನಾ ಪಡೆಗಳ ನಿತ್ಯ ನಡೆಸುತ್ತಿದ್ದ ಫೈರಿಂಗ್‌ ಅಭ್ಯಾಸ ಎಂದು ತಿಳಿದಿದ್ದರು. ಆದರೆ ದಾಳಿ-ಪ್ರತಿದಾಳಿಯ ಸದ್ದು ತೀವ್ರಗೊಂಡಾಗ ಎಲ್ಲರೂ ಆತಂಕಗೊಂಡರು. ಕೂಡಲೇ ರೆಡ್‌ ಅಲರ್ಟ್‌ ಘೋಷಿಸಲಾಯಿತು.

ಮಾಹಿತಿ ಪಡೆದ ರಾಜನಾಥ್‌:

ಸೇನಾ ಶಿಬಿರದ ಮೇಲೆ ದಾಳಿ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಜಮ್ಮು-ಕಾಶ್ಮೀರ ಪೊಲೀಸ್‌ ವರಿಷ್ಠಾಧಿಕಾರಿ ಜತೆ ದೂರವಾಣಿಯಲ್ಲಿ ಮಾಹಿತಿ ಪಡೆದಿದ್ದಾರೆ. ”ಡಿಜಿಪಿ ಎಸ್‌.ಪಿ. ವೈದ್‌ ಅವರು ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವರಿಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಗೃಹ ಸಚಿವಾಲಯ ಎಲ್ಲಾ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದೆ,” ಎಂದು ಗೃಹ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.

ಸೇನೆ ಮತ್ತು ಇತರ ಭದ್ರತಾ ಪಡೆಗಳು ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಭಾರತೀಯರು ತಲೆ ತಗ್ಗಿಸಲು ಎಂದಿಗೂ ಅವಕಾಶ ಬಿಡುವುದಿಲ್ಲ.
– ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

**********************************************

ಮುಂದುವರಿದ ಪಾಕ್‌ ಕದನ ವಿರಾಮ ಉಲ್ಲಂಘನೆ

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕ್‌ ಪಡೆಗಳು ಕದನ ವಿರಾಮ ಉಲ್ಲಂಘನೆ ಮುಂದುವರಿಸಿದ್ದು, ಶನಿವಾರವೂ ನಾಗರಿಕರನ್ನು ಗುರಿಯಾಗಿಸಿಕೊಂಡು ತೀವ್ರ ಶೆಲ್‌ ದಾಳಿ ನಡೆಸಿವೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸೇನೆ ತಿಳಿಸಿದೆ. ಈ ಮಧ್ಯೆ, ಪಾಕ್‌ ಪಡೆಗಳಿಂದ ನಿತ್ಯ ದಾಳಿಯಿಂದಾಗಿ ಗಡಿ ಭಾಗದ ಜನತೆ ತೀವ್ರ ಕಂಗಾಲಾಗಿದ್ದಾರೆ.

ಸದನದಲ್ಲಿ ಪಾಕ್‌ ಪರ-ವಿರೋಧ ಘೋಷಣೆ

ಜಮ್ಮು: ಸುಂಜ್‌ವಾನ್‌ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ಪ್ರಕರಣ ಶನಿವಾರ ಜಮ್ಮು-ಕಾಶ್ಮೀರ ವಿಧಾನಸಭಾ ಅಧಿವೇಶನದಲ್ಲೂ ಪ್ರತಿಧ್ವನಿಸಿತು.

ಕಲಾಪದ ವೇಳೆ ದಾಳಿಯನ್ನು ಖಂಡಿಸಿ, ಬಿಜಪಿ ಶಾಸಕರು ಪಾಕ್‌ ವಿರುದ್ಧ ಘೋಷಣೆಗಳನ್ನು ಕೂಗಿ ಗದ್ದಲ ಮಾಡಿದರು. ಇದೇ ವೇಳೆ, ಸೋನಾವರಿ ಕ್ಷೇತ್ರವನ್ನು ಪ್ರತಿನಿಧಿಸುವ ನ್ಯಾಷನಲ್‌ ಕಾನ್ಫರೆನ್ಸ್‌ ಶಾಸಕ ಅಕ್ಬರ್‌ ಲೋನೆ ಶನಿವಾರ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಲ್ಲದೆ, ತೀವ್ರ ಆಕ್ರೋಶಕ್ಕೂ ತುತ್ತಾದರು. ಅಕ್ಬರ್‌ ಲೋನೆ ಅವರ ಪಾಕ್‌ ಪರ ಘೋಷಣೆ ಬೆನ್ನಲ್ಲೇ, ಬಿಜೆಪಿ ಶಾಸಕರ ವಾಗ್ದಾಳಿ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಗದ್ದಲ ಮತ್ತಷ್ಟು ಹೆಚ್ಚಾಯಿತು.

ಬಿಜೆಪಿ ಶಾಸಕರು ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುವ ಮೂಲಕ ಪ್ರಚೋದಿಸಿದ್ದರಿಂದ ಈ ರೀತಿ ಮಾಡಿದ್ದಾಗಿ ಶಾಸಕ ಸಮಜಾಯಿಷಿ ನೀಡಿದ್ದಾರೆ. ”ಹೌದು, ನಾನು ಹಾಗೆ ಹೇಳಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅದರಿಂದ ಬೇರೆ ಯಾರಿಗೂ ಸಮಸ್ಯೆಯಿಲ್ಲವೆಂದು ನಾನಂದುಕೊಳ್ಳುತ್ತೇನೆ,” ಎಂದು ಲೋನೆ ಸಮರ್ಥಿಸಿಕೊಂಡಿದ್ದಾರೆ.

ಅಂತರ ಕಾಯ್ದುಕೊಂಡ ಪಕ್ಷ: ಈ ಮಧ್ಯೆ, ಲೋನೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರು, ”ಈ ಹೇಳಿಕೆ ವೈಯಕ್ತಿಕ. ಪಕ್ಷಕ್ಕೂ ಅವರ ಹೇಳಿಕೆಗೂ ಸಂಬಂಧವಿಲ್ಲ,” ಎಂದು ಹೇಳುವ ಮೂಲಕ ವಿವಾದದಿಂದ ಅಂತರ ಕಾಯ್ದುಕೊಂಡಿದ್ದಾರೆ. ”ತಪ್ಪಾದ ಘೋಷಣೆಗಳ ಬಗ್ಗೆಯೇ ಯೋಚಿಸುವ ಬದಲು ಶನಿವಾರ ನಡೆದ ಉಗ್ರ ದಾಳಿಯತ್ತ ಗಮನ ನೀಡಬೇಕು,” ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದಲ್ಲಾ ಹೇಳಿದ್ದಾರೆ.

ಶೈಕ್ಷಣಿಕ ನೆರವಿನ ಮಿತಿ ತೆರವಿಗೆ ಮನವಿ

ಹೊಸದಿಲ್ಲಿ: ಹುತಾತ್ಮರಾದ ಅಥವಾ ಗಾಯಗೊಂಡು ಅಂಗವೈಕಲ್ಯಕ್ಕೆ ಈಡಾದ ಯೋಧರ ಮಕ್ಕಳ ಶಿಕ್ಷಣಕ್ಕೆ ನೀಡಲಾಗುತ್ತಿರುವ ನೆರವಿನ ಮೊತ್ತಕ್ಕೆ ವಿಧಿಸಿರುವ 10,000 ರೂ. ಮಿತಿಯನ್ನು ತೆಗೆದು ಹಾಕುವಂತೆ ರಕ್ಷಣಾ ಸಚಿವಾಲಯ ಮನವಿ ಮಾಡಿದೆ. ಶೈಕ್ಷಣಿಕ ನೆರವಿನ ಮೊತ್ತವನ್ನು ತಿಂಗಳಿಗೆ 10 ಸಾವಿರ ರೂಪಾಯಿಗೆ ಮಿತಿಗೊಳಿಸಿ ಕಳೆದ ವರ್ಷ ಜೂನ್‌ 1ರಂದು ಸರಕಾರ ಆದೇಶ ಹೊರಡಿಸಿತ್ತು. ಇದಕ್ಕೆ ಮೂರು ಸೇನಾ ವಿಭಾಗಗಳಿಂದಲೂ ಅಸಮಾಧಾನ ವ್ಯಕ್ತವಾಗಿತ್ತು. ಸೇನಾ ಸಿಬ್ಬಂದಿ ಸಮಿತಿ ಮುಖ್ಯಸ್ಥರು ಕೂಡ ವಿರೋಧ ಸೂಚಿಸಿದ್ದರು. ಈ ಎಲ್ಲ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡಿರುವ ರಕ್ಷಣಾ ಸಚಿವಾಲಯ, ಶೈಕ್ಷಣಿಕ ನೆರವಿನ ಮಿತಿಯನ್ನು ರದ್ದುಗೊಳಿಸುವಂತೆ ಕೋರಿ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದೆ.

Comments are closed.