ಮಂಗಳೂರು: ತೇನ ವಿನಾ ತೃಣಮಪಿ ನ ಚಲತಿ ಅಂದರೆ ಭಗವಂತನ ಚಿತ್ತವಿರದೆ ಹುಲ್ಲುಕಡ್ಡಿಯೂ ಅಲುಗಾಡದು ಎಂಬ ನುಡಿಗಟ್ಟಿನ ಹಿಂದೆ ಹುಲ್ಲಿನ ಬಗ್ಗೆ ಕೊಂಚ ಕೀಳರಿಮೆ ಇದೆ ನಿಜ. ಆದರೆ ವರ್ಷಕ್ಕೊಮ್ಮೆ ಗೌರಿ-ಗಣಪನ ಮಡಿಗೇರುವ ಗರಿಕೆಯದು ಮಾತ್ರ ವಿಶಿಷ್ಟ ಹಿನ್ನೆಲೆ.
ಗಣಪನ ಮೂರ್ತರೂಪದ ಆರಾಧನಾ ಸಂಸ್ಕೃತಿಯ ಆರಂಭದ ಜೊತೆಗೆ ಗರಿಕೆಯ ಬಳಕೆ ಕೂಡ ಶುರು ಆಗಿದೆ. ವಿಶ್ವದ ಎಲ್ಲೆಡೆ ಗರಿಕೆ ಇದೆ. ಬರ್ಮುಡಾದಿಂದ ಬಹಾಮಸ್ ತನಕ ಉತ್ತರ ಕಾಶ್ಮೀರದ ಬಾರಾಮುಲ್ಲಾದಿಂದ ದಕ್ಷಿಣ ತುದಿಯ ನಾಗರ ಕೋಯಿಲ್ ತನಕ ಎಲ್ಲೆಲ್ಲೂ ಗರಿಕೆ ಬೆಳೆದೀತು.
ನಮ್ಮ ರಾಜ್ಯದ ದಕ್ಷಿಣದ ಕೊಡಿನಾಡು ಕೊಡಗು. ಆ ಜಿಲ್ಲೆಯ ತುತ್ತ ತುದಿಯ ಪುಟ್ಟ ಹಳ್ಳಿಯ ಹೆಸರೇ ಕರಿಕೆ. ಅದರ ಹಿಂದೆ ಗರಿಕೆಯ ಹೆಸರೇ ಇದೆ. ಇತರ ದೇಶಗಳಲ್ಲಿ ಗರಿಕೆ ಒಂದು ಕಳೆ. ನಮಗೆ ಪೂಜಾರ್ಹ ಹುಲ್ಲು. ಅದರ ನಾನಾ ಬಳಕೆಗಳ ದೊಡ್ಡ ಪಟ್ಟಿ ಆಯುರ್ವೇದದ ಸಂಸ್ಕೃತಗ್ರಂಥಗಳಲ್ಲಿವೆ.
ಐಹೊಳೆ, ಪಟ್ಟದ ಕಲ್ಲು, ಬೇಲೂರು, ಹಳೆಬೀಡುಗಳ ಶಿಲ್ಪ ಕಲೆ ಕಂಡಿದ್ದೀರಿ. ಅವುಗಳ ಕಲ್ಲು ಕೆತ್ತನೆಗೆ ಕೆಲವು ಮೂಲಿಕೆ ರಸ ಹಚ್ಚಿ ಕಲ್ಲು ಮಿದು ಮಾಡುವ ಕಲೆ ನಮ್ಮವರಿಗೆ ತಿಳಿದಿತ್ತು. ಹೀಗೆಂದು ದೇವನಹಳ್ಳಿಯ ಶಿಲ್ಪಕಲಾಶಾಲೆಯ ಸ್ಥಾಪಕ ದಿ. ಹನುಮಂತಾಚಾರ್ಯ ಹೇಳಿದ್ದರು. ಅಂತಹ ಮೂಲಿಕೆ ಪೈಕಿ ಗರಿಕೆ ಸಹ ಒಂದು. ಏಕೆಂದರೆ ಗರಿಕೆಯ ಪರ್ಯಾಯ ಹೆಸರುಗಳ ಪೈಕಿ ಒಂದು ಹೆಸರು ಲೋಹದ್ರಾವಿಣೀ! ಅಂದರೆ ಕಬ್ಬಿಣದಂತಹ ಲೋಹಗಳನ್ನೇ ಕರಗಿಸುವ ಕಸುವು ಗರಿಕೆಗಿದೆ ಎಂದರ್ಥವಾಗುತ್ತದೆ. ಆದರೆ ಆ ಮಾಹಿತಿ, ಬಳಕೆ ಲುಪ್ತವಾಗಿದೆ.
ಅನಿಯಮಿತ ಮುಟ್ಟಿನ ಸ್ರಾವದ ಹಿಂದೆ ಗರ್ಭಾಶಯದ ಒಳಗಂಟು(ಫೈಬ್ರಾಯಿಡ್) ಪ್ರಬಲ ಕಾರಣ. ಅಂತಹ ಸಂದರ್ಭಗಳಲ್ಲಿ ದಾಳಿಂಬೆ ಸಿಪ್ಪೆ ಕಷಾಯ ಮತ್ತು ಗರಿಕೆಯ ರಸದ ಕುಡಿಸುವ ಮನೆ ಮದ್ದು ರೂಢಿಯಲ್ಲಿದೆ. ಅನೇಕರಿಗೆ ಗರ್ಭಕೋಶದ ಶಸ್ತ್ರ ಕ್ರಿಯೆ ನಡೆಸದಂತೆ ಗರಿಕೆ ರಸಸೇವನೆ ಒಳಿತು ಮಾಡಿದೆ. ಅಂದರೆ ಕಲ್ಲು, ಲೋಹ ಕರಗಿಸುವ ಗರಿಕೆ ಜೀವಂತ ಒಡಲ ಪುಟ್ಟ ಗಂಟು ಕರಗಿಸಿದರೆ ಅಚ್ಚರಿ ಇಲ್ಲ. ಮಹಿಳೆಯರ ತಿಂಗಳ ತೊಂದರೆ ಪರಿಹರಿಸಲು ಗರಿಕೆ ಸಂಜೀವಿನಿ.
ಗಂಡದೂರ್ವಾ, ಗಂಡಾಲಿ, ಶತವೀರ್ಯಾ, ಗೋಲೋಮಿ, ಮತ್ಸ್ಯ ಶಕುಲಾದನೀ ಇತ್ಯಾದಿ ಪರ್ಯಾಯ ಹೆಸರು ಗರಿಕೆಯದು. ಇಲ್ಲಿ ಗಂಡ ಅಂದರೆ ಗಿಣ್ಣು ಅಥವಾ ಗಂಟು. ಗಂಟು ಗಂಟುಗಳಲ್ಲಿ ಬೇರು. ಅಲ್ಲಿಯೇ ಹೊಸ ಕವಲು. ಅದನ್ನೇ ಉಪನಿಷದ್ಗಳು ಕಾಂಡಾತ್ ಕಾಂಡಾತ್ ಪ್ರರೋಹಂತಿ ಎಂಬ ಸುಂದರ ಬಣ್ಣನೆಯೊಂದಿಗೆ ಸಸ್ಯಶಾಸ್ತ್ರೀಯ ವರ್ಣನೆ ಮಾಡುತ್ತವೆ.
ಹಸುಗಳು ಅತಿಯಾಗಿ ಇಷ್ಟ ಪಡುವ ವಸ್ತು ಗರಿಕೆ, ಒಂದು ಹುಲ್ಲು ನೂರು ಗುಣ ಎಂಬ ಗರಿಕೆಯ ಅತಿಶಯೋಪಕಾರ ಕಾಣುವೆವು. ನಿಮ್ಮ ಮನೆಯ ನಾಯಿ ಹರಿಕೆ ಹುಲ್ಲನ್ನು ಮೆಲ್ಲುವ ಮತ್ತು ಕೆಲವೊಮ್ಮೆ ಉದರಶುದ್ಧಿ ಮಾಡಿಕೊಳ್ಳುವ ಪ್ರಕೃತಿ ಚಿಕಿತ್ಸೆ ಕಂಡಿದ್ದೀರಿ. ಚರಕಸಂಹಿತೆಯ ಜೀವನೀಯ, ಅಂದರೆ ಜೀವನಕ್ಕೆ ಉಪಕರಿಸುವ ಗಣ(ಗುಂಪು)ದಲ್ಲಿ ಗರಿಕೆಗೆ ಇದೆ.
ಜ್ವರ, ಮೈಉರಿ, ಕಫ ಉಲ್ಬಣತೆ, ಚರ್ಮಗಾದರಿ, ಗುಳ್ಳೆ, ನೀರೂಡುವ ತುರಿಗಜ್ಜಿ, ಸರ್ಪಸುತ್ತು ಪರಿಹಾರಕ್ಕೆ ಗರಿಕೆ ಮದ್ದು. ಬಾಯಿ ರುಚಿ ಹೆಚ್ಚಿಸೀತು. ವಾಂತಿಗೆ ಕಡಿವಾಣ. ಮೂರ್ಛೆ ತಿಳಿವಿಗೆ ಗರಿಕೆರಸದ ಮೂಗಿನ ಬಳಕೆಗೆ ಉಲ್ಲೇಖಗಳಿವೆ. ಎಂತಹದೇ ರಕ್ತಸ್ರಾವ ನಿಲುಗಡೆಗೆ ಗರಿಕೆ ಬೇಕು. ವಿಷಚಿಕಿತ್ಸೆಗೆ ಗರಿಕೆ ಉತ್ತಮ ಮದ್ದು. ಕೇರುಗಾಯದ ಮದ್ದಾಗಿ ಗರಿಕೆರಸದ ಲೇಪ ಬಯಲು ಸೀಮೆಯ ಜನಪದ ವೈದ್ಯ. ಮೂತ್ರಕಟ್ಟು, ಉರಿ ಮತ್ತು ಕಲ್ಲುಪರಿಹಾರಕ್ಕೆ ಗರಿಕೆ ರಸ ಪಾನ ಚಿಕಿತ್ಸೆಯಾಗಿದೆ.
ಗರಿಕೆಯ ತುದಿ ಚಿಗುರು ಆಯ್ದು ತರುವಿರಿ. ಬರೋಬ್ಬರಿ ನೂರೆಂಟು ಗಂಟು! ಅಂತಹ ಗರಿಕೆ ಚಿಗುರಿನ ಹಾರ ಗಣಪನಿಗರ್ಪಿಸಿರಿ. ಆದರೆ ಅದನ್ನು ಮರುದಿನ ಮೋರಿಗೆ ಎಸೆಯದಿರಿ. ನೂರೈವತ್ತು ವರ್ಷಗಳ ಹಿಂದೆ ನಮ್ಮ ನೆಲದಲ್ಲಿ ಒಂದು ಪುಸ್ತಕ ಸಂಪದಿತ. ಅದರ ಹೆಸರು ‘ಸಹಸ್ರಾರ್ಧ ವೃಕ್ಷಾದಿ ವರ್ಣನಂ.’ ಅಂದರೆ ಐನೂರು ಗಿಡ ಮರಗಳ ಬಣ್ಣನೆ. ಹಾರದ ಗರಿಕೆ ಆಹಾರವಾಗುವ ಸುಂದರ ವರ್ಣನೆ ಅಂತಹ ಗ್ರಂಥದ ಅಮೂಲ್ಯ ಮಾಹಿತಿ.
ಗರಿಕೆರಸ ಕುಡಿಯುವ ನೀವು ಗರಿಕೆ ಹಾರದ ಪಲ್ಯ ಮಾಡಿ ಆಹಾರವಾಗಿ ಬಳಸಿರಿ. ಕಲ್ಲು ಕರಗಿಸುವ ಈ ಹುಲ್ಲು ಗಣಪನ ಹಬ್ಬದ ಉಂಡೆ, ಚಕ್ಲಿ, ಕೋಡುಬಳೆ, ಒಬ್ಬಟ್ಟು ಕರಗಿಸೀತಲ್ಲವೇ? ಈ ಗ್ರಂಥದ ಮತ್ತೊಂದು ಮಾಹಿತಿ ಕೂಡ ಸ್ವಾರಸ್ಯದ್ದೇ. ಗರಿಕೆಯ ಬೇರಗೆದು ತೆಗೆಯಿರಿ. ಬೆಲ್ಲದ ಪಾನಕ ಮಾಡಿ ಕುಡಿಯಿರಿ. ಅದು ಬಹಳ ತಂಪು. ಆದರೆ ಬೇರಗೆಯುವ ಕೆಲಸ ಮಾತ್ರ ಸುಲಭದ್ದಲ್ಲ.
ಗರಿಕೆಯ ಹುಲ್ಲಿನಿಂದ ಒಂದು ದೊಡ್ಡ ಸಾಮ್ರಾಜ್ಯದ ಸ್ಥಾಪನೆಯ ಕತೆ ಗೊತ್ತೇ?
ನಂದ ರಾಜ್ಯದ ರಾಜಕುಮಾರರು ಒಮ್ಮೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಒಬ್ಬ ಬ್ರಾಹ್ಮಣ ರಸ್ತೆ ಪಾಟಲಿಪುರದ ಹೆದ್ದಾರಿಯ ಗರಿಕೆಗೆ ತೊಡರಿಕೊಂಡು ಎಡವಿದ. ಆತನ ಶಿಖೆ ಬಿಚ್ಚಿಹೋಯಿತು. ಅದನ್ನು ಕಂಡ ರಾಜಕುಮಾರರು ಬಿದ್ದು ಬಿದ್ದು ಕೇಕೆ ಹಾಕಿ ನಗತೊಡಗಿದರು. ಆಗ ಸಿಟ್ಟಿಗೆದ್ದ ಬ್ರಾಹ್ಮಣ ಹೀಗೆಂದನು: ‘ಎಲವೋ ದುಷ್ಟರೇ, ಇಂತಹ ರಾಜಪಥದಲ್ಲಿ ಗರಿಕೆಯ ಹುಲ್ಲು ಸ್ವೇಚ್ಛೆಯಾಗಿ ಬೆಳೆಯಲು ನಿಮ್ಮ ಅರಾಜಕತೆ ಕಾರಣ.
ಇಂದು ನನ್ನ ಬಿಚ್ಚಿದ ಶಿಖೆ ಕಟ್ಟಲಾರೆ. ನಿಮ್ಮ ನಂದವಂಶ ನಿರ್ವಂಶ ಮಾಡದೆ ಇರಲಾರೆ. ಇಗೋ ನೋಡಿರಿ. ಈ ಗರಿಕೆಯನ್ನು ಬುಡ ಸಮೇತ ಕಿತ್ತು ಹಾಕುವೆನು. ಇಲ್ಲಿ ಬೆಂಕಿ ಹಾಕಿ ಸುಡುವೆನು. ಮತ್ತೆ ಇಂತಹ ಹುಲ್ಲು ಇಲ್ಲಿ ಹುಟ್ಟದಿರಲಿ. ನಿಮ್ಮಂತಹ ದುಷ್ಟರು ಮತ್ತೆ ನಮ್ಮ ನೆಲ ಆಳದಿರಲಿ.’ ಕೂಡಲೇ ನೆಲ ಬಗೆದು ಬ್ರಾಹ್ಮಣ ಗರಿಕೆ ತರಿದನು.
ಆಗ ಅಲ್ಲಿಗೆ ಚಂದ್ರಗುಪ್ತ ಆಗಮಿಸಿದನು. ಅನಂತರ ನಂದ ಸಾಮ್ಯಾಜ್ಯದ ಅಳಿವು, ಗುಪ್ತರ ಸ್ಥಾಪನೆ ಇತಿಹಾಸದ ಪುಟಗಳು. ಜುಟ್ಟು ಬಿಚ್ಚಿ ಶಪಥ ಮಾಡಿದಾತನೇ ಚಾಣಕ್ಯ. ಅರ್ಥಶಾಸ್ತ್ರ ಗ್ರಂಥದ ಕರ್ತೃ. ಭಾರತದಲ್ಲಿ ಹೊಸ ಶಕೆಗೆ ಗರಿಕೆಯ ಹುಲ್ಲು ಕಾರಣವಾದ ಕತೆ ಇದು.
ತುಳು ಭಾಷಿಗರ ಹಳೆಯ ಶಬ್ದಭಂಡಾರದಲ್ಲಿ ಒಂದು ಪದ ಇದೆ. ಅದಕ್ಕೆ ‘ಪಸ್ಕಡಿ’ ಎಂಬ ಹೆಸರು. ‘ಅಗರ್’ ಎಂದರೆ ಮಣ್ಣಗೆದು ಮಾಡಿದ ಕಂದಕದ ಬದಿಯ ಮಣ್ಣುಗುಡ್ಡೆಯ ಸಾಲು. ಅದು ಮತ್ತೆ ಮಳೆಗೆ ಕೊಚ್ಚಿ ಹೋಗದಂತೆ ಪಸ್ಕಡಿ ಅಂಟಿಸುವರು. ಗರಿಕೆಯಂತಹ ಹುಲ್ಲು ಯಥೇಚ್ಛ ಬೆಳೆದ ನೆಲದ ಪುಟ್ಟ ಹಾಸು ಪಸ್ಕಡಿ.
ಮಣ್ಣು ಸವಕಳಿ ತಡೆಯುವ ಸುಲಭ ವಿಧಾನ. ಇಂತಹ ಗರಿಕೆ ಹುಲ್ಲಿನ ಉಪಕಾರ ನೆನೆದವರಿಲ್ಲ. ಅಂತಹ ಪಸ್ಕಡಿಗಳು ಅರ್ಥಾತ್ ಗರಿಕೆ ಹಸಿರುಹಾಸು ಇಂದು ಎಲ್ಲ ನರ್ಸರಿಗಳಲ್ಲಿ ಲಭ್ಯ. ಅದರ ಬೆಲೆ ಚದರ ಮೀಟರ್ಗೆ ಸಾವಿರಗಟ್ಟಲೆ! ಉದ್ಯಾನಗಳ, ಕೈದೋಟಗಳ ಅಂದ ಚಂದಕ್ಕೆ ಗರಿಕೆಯ ಹಸಿರು ಮೆರುಗು ಕಳೆಗಟ್ಟೀತು.
ಸಾಸಿವೆಗಿಂತಲೂ ಕಿರಿದಾದ ಗರಿಕೆ ಬೀಜ ಯಥೇಚ್ಛ ಬೆಳೆದರೆ ಎರಡೂವರೆ ಚದರ ಮೀಟರ್ ಹರಹು ಪಡೆಯಬಲ್ಲುದು. ಕೇವಲ ಐದು ತಿಂಗಳಲ್ಲಿ ಅಂತಹ ಬೆಳೆ. ಐದಡಿ ತಳಕ್ಕಿಳಿವ ಬೇರು! ಸಮುದ್ರ ತಟದ ಉಪ್ಪು ನೀರು ಸಹ ಗರಿಕೆಯ ಕೆಚ್ಚಡಗಿಸದು. ಬಂಜರು ನೆಲದಲ್ಲೂ ಗರಿಕೆ ಬೆಳೆದೀತು.
Comments are closed.