ಕ್ರೀಡೆ

ಶಮಿಗೆ ಧೋನಿ ನೀಡಿದ ಮಹತ್ವದ ಟಿಪ್ಸ್‌ ಪಂದ್ಯದ ಗತಿಯನ್ನೇ ಬದಲಾಯಿಸಿತು ! ಟಿಪ್ಸ್ ಏನು ಗೊತ್ತಾ..?

Pinterest LinkedIn Tumblr

ಸೌತಾಂಪ್ಟನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಅಫಘಾನಿಸ್ತಾನ ವಿರುದ್ಧ ನಿರ್ಣಾಯಕ ಹಂತದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿರುವ ಮಹತ್ವದ ಟಿಪ್ಸ್‌ನಿಂದ ಪಂದ್ಯದ ಗತಿಯನ್ನೇ ಬದಲಾಯಿಸುವಂತಾಗಿತ್ತು.

ಅಂತಿಮ ಓವರ್‌ನಲ್ಲಿ ಅಫ್ಘಾನ್ ಗೆಲುವಿಗೆ 16 ರನ್‌ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಪಂದ್ಯ ಯಾವ ಕಡೆಗೂ ಬೇಕಾದರೂ ವಾಲಬಹುದಿತ್ತು. ಯಾಕೆಂದರೆ ಸೆಟ್ ಬ್ಯಾಟ್ಸ್‌ಮನ್ ಮೊಹಮ್ಮದ್ ನಬಿ ಕ್ರೀಸಿನಲ್ಲಿದ್ದರು.

ಅಷ್ಟೇ ಯಾಕೆ ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ಫಿಫ್ಟಿ ಸಾಧನೆ ಮಾಡಿದರು. ಈ ನಿರ್ಣಾಯಕ ಹಂತದಲ್ಲಿ ಶಮಿ ಬಳಿ ಓಡೋಡಿ ಬಂದ ಹಿರಿಯ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಮಹತ್ವದ ಸಲಹೆಯೊಂದನ್ನು ನೀಡಿದರು. ಇದುವೇ ಪಂದ್ಯದ ತಿರುವಿಗೆ ಕಾರಣವಾಯಿತು.

ನಂತರದ ಎಸೆತದಲ್ಲಿ ನಬಿ ವಿಕೆಟ್ ಪಡೆದ ಶಮಿ ಬಳಿಕ ಅಫ್ತಬ್ ಅಲಂ ಹಾಗೂ ಮುಜೀಬ್ ಉರ್ ರೆಹ್ಮಾನ್ ಹೊರದಬ್ಬುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಭಾರತ 11 ರನ್ ಅಂತರದ ರೋಚಕ ಗೆಲುವು ದಾಖಲಿಸಿತು.

ಅಷ್ಟಕ್ಕೂ ಧೋನಿ ನೀಡಿರುವ ಟಿಪ್ಸ್ ಏನಾಗಿತ್ತು? ಈ ಬಗ್ಗೆ ಪಂದ್ಯದ ಬಳಿಕ ಮೊಹಮ್ಮದ್ ಶಮಿ ವಿವರಣೆ ನೀಡಿದ್ದಾರೆ. ನನ್ನ ಬಳಿ ಬಂದ ಮಹಿ ಬಾಯ್, ಮತ್ತೊಂದು ಬೌಂಡರಿ ಹೋಗುವ ಸಾಧ್ಯತೆಯಿದೆ. ಹಾಗಾಗಿ ನೀನು ನಿನ್ನ ಸಾಮರ್ಥ್ಯದಲ್ಲಿ ನಂಬಿಕೆಯನ್ನಿಟ್ಟುಕೊಂಡು ರಣತಂತ್ರವನ್ನು ಕಾರ್ತಗತಗೊಳಿಸಲು ಪರಿಶ್ರಮಿಸು. ಅಲ್ಲದೆ ಯೋಜನೆಯನ್ನು ಬದಲಾಯಿಸುವ ಅಗತ್ಯವಿಲ್ಲ. ನಮ್ಮ ಬಳಿ 16 ರನ್‌ಗಳಿದ್ದು ಖಂಡಿತವಾಗಿಯೂ ಗೆಲ್ಲಲಿದ್ದೇವೆ ಎಂದು ಶಮಿ ಹೇಳಿದರು.

ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಪ್ರಕಾರ, ಕೆಲವೊಮ್ಮೆ ಅತಿ ಒತ್ತಡದ ಸನ್ನವೇಶದಲ್ಲಿ ಅತ್ಯುತ್ತಮ ಬೌಲರ್‌ಗಳು ಸಹ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಸುವಲ್ಲಿ ಎಡವುತ್ತಾರೆ. ಇಂತಹ ಸಂದರ್ಭದಲ್ಲಿ ಮಹಿಯಂತಹ ಆಟಗಾರರು ಬೌಲರ್‌ಗಳ ಬಳಿ ತೆರಳಿ ತಾಳ್ಮೆಯಿಂದ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ನೆನಪಿಸುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಭಾರತ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಜತೆಗೆ ಅನುಭವಿ ಮಹೇಂದ್ರ ಸಿಂಗ್ ಧೋನಿ ಸಾಥ್ ನೀಡುತ್ತಿರುವುದು ವಿಶ್ವಕಪ್‌ನಲ್ಲಿ ನೌಕಾಟ್ ಹಂತದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Comments are closed.