ಸೌತಾಂಪ್ಟನ್ನ ರೋಸ್ ಬೌಲ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದೆ. 228ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ್ದ ಭಾರತ, ಸುಲಭವಾಗಿ ಗೆಲುವಿನ ಕೇಕೆ ಹಾಕಿತು. ಅಷ್ಟಕ್ಕೂ ಭಾರತದ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು ಯಾವವು ಗೊತ್ತಾ? ಆ ಬಗ್ಗೆ ಇಲ್ಲಿದೆ ಮಾಹಿತಿ.
ಚಹಾಲ್-ಬುಮ್ರಾ ಬಾಲಿಂಗ್ ಕಮಾಲ್:
ಭಾರತ ಕ್ರಿಕೆಟ್ ತಂಡ ನಿನ್ನೆ ಅಕ್ಷರಶಃ ಮೋಡಿಯನ್ನೇ ಮಾಡಿತ್ತು. ದಕ್ಷಿಣ ಆಫ್ರಿಕಾದವರನ್ನು ಸಾಧಾರಣ ಮೊತ್ತಕ್ಕೆ ಕಟ್ಟು ಹಾಕುವಲ್ಲಿ ಯಜುವೇಂದ್ರ ಚಹಾಲ್ ಹಾಗೂ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರವಹಿಸಿದ್ದರು. ಓಪನರ್ಗಳಾಗಿ ಕ್ರೀಸ್ಗೆ ಬಂದ ಕ್ವಿಂಟನ್ ಡಿಕಾಕ್ ಹಾಗೂ ಆಶೀಮ್ ಆಮ್ಲಾ ರನ್ ಕಲೆಹಾಕಲು ಪರದಾಡಿದರು. 3ನೇ ಓವರ್ನ ಬುಮ್ರಾ ಬೌಲಿಂಗ್ನಲ್ಲಿ ಹಶೀಮ್ ಆಮ್ಲಾ(6) ಸ್ಲಿಪ್ನಲ್ಲಿ ರೋಹಿತ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇದಾದ ಬೆನ್ನಲ್ಲೆ ಡಿಕಾಕ್(10) ಕೂಡ ಸ್ಲಿಪ್ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಮೂಲಕ ಬುಮ್ರಾ ದಕ್ಷಿಣ ಆಫ್ರಿಕಾಗೆ ಆರಂಭಿಕ ಆಘಾತ ನೀಡಿದ್ದರು. ನಂತರ ಮೋಡಿ ಮಾಡುವ ಸರದಿ ಚಹಾಲ್ದಾಗಿತ್ತು. ನಾಲ್ಕು ವಿಕೆಟ್ ಪಡೆಯುವ ಮೂಲಕ ಅವರು ಎಲ್ಲರ ಗಮನ ಸೆಳೆದರು.
ರೋಹಿತ್ ಜವಾಬ್ದಾರಿಯುತ ಆಟ:
ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ನಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ್ದರು. ಅಲ್ಲದೆ, ವಿಶ್ವಕಪ್ ಅಭ್ಯಾಸ ಪಂದ್ಯದಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿರಲಿಲ್ಲ. ಹಾಗಾಗಿ ನಿನ್ನೆ ಅವರು ಆಟವಾಡುತ್ತಾರೋ ಅಥವಾ ಇಲ್ಲವೋ ಎನ್ನುವ ಅನುಮಾನ ಕಾಡಿತ್ತು. ಆದರೆ, ಉಪ ನಾಯಕನಾಗಿ ರೋಹಿತ್ ಜವಾಬ್ದಾರಿಯುತ ಆಟವಾಡಿದ್ದರು. ಈ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕೊಹ್ಲಿ ಚಾಣಾಕ್ಯತೆ:
ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಮೊದಲ ವಿಶ್ವಕಪ್ನಲ್ಲೇ ಅವರು ತಮ್ಮ ಚಾಣಾಕ್ಯತೆಯನ್ನು ಮೆರೆದಿದ್ದಾರೆ. ಕ್ಷೇತ್ರ ರಕ್ಷಣೆ ವಿಭಾಗದಲ್ಲಂತೂ ಅವರ ಚಾಣಾಕ್ಯತೆ ಕೆಲಸ ಮಾಡಿದೆ. ಮೊದಲ ಪವರ್ಪ್ಲೇ ವೇಳೆ ಮೂರು ಸ್ಲಿಪ್ಗಳನ್ನು ನಿಲ್ಲಿಸಿದ್ದು ಫಲ ನೀಡಿದೆ. ಉತ್ತಮ ಫೀಲ್ಡಿಂಗ್ ನಿಯೋಜನೆ ಹಾಗೂ ಸರಿಯಾದ ಸಮಯದಲ್ಲಿ ಸೂಕ್ತ ಬೌಲರ್ಗಳ ಆಯ್ಕೆಯಲ್ಲಿ ಕೊಹ್ಲಿ ಮೆರೆದ ಚಾಣಾಕ್ಯತೆ ಭಾರತದ ಗೆಲುವನ್ನು ಸುಲಭವಾಗಿಸಿದೆ.
Comments are closed.