ಬೆಂಗಳೂರು: ನ್ಯೂಜಿಲೆಂಡ್ನಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಫೈನಲ್ನಲ್ಲಿ ಗೆದ್ದು ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದಂತೆಯೇ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.
ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅನೇಕ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಗೆಲುವಿಗಾಗಿ ದ್ರಾವಿಡ್ ಮತ್ತು ತಂಡದ ಆಟಗಾರರನ್ನು ಅಭಿನಂದಿಸಿರುವ ನೂರಾರು ಸಂದೇಶಗಳು ಟ್ವಟಿರ್ನಲ್ಲಿ ಪ್ರಕಟಗೊಂಡಿವೆ.
ಯುವ ಪಡೆಯನ್ನು ಕಟ್ಟುವಲ್ಲಿ ರಾಹುಲ್ ದ್ರಾವಿಡ್ ಅವಿರತ ಶ್ರಮಿಸಿದ್ದಾರೆ. ಪಂದ್ಯಾವಳಿಯಲ್ಲಿ ತಂಡವನ್ನು ಚಾಂಪಿಯನ್ ಮಾಡಲೇಬೇಕು ಎಂಬ ಹಟದೊಂದಿಗೆ ಯುವ ಪಡೆಯೊಂದಿಗೆ ದ್ರಾವಿಡ್ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದ್ದರು.
ಕಿರಿಯ ಕ್ರಿಕೆಟಿಗರ ಗಮನವೆಲ್ಲ ಆಟದತ್ತ ಹಾಗೂ ಗುರಿಯತ್ತ ಕೇಂದ್ರೀಕೃತವಾಗಬೇಕೆಂಬ ಉದ್ದೇಶದಿಂದ ಫೈನಲ್ ಪಂದ್ಯದ ತನಕ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಕೋಚ್ ದ್ರಾವಿಡ್ ಸೂಚಿಸಿದ್ದರು. ಇಂತಹ ಕಟ್ಟುನಿಟ್ಟಿನ ಆದೇಶಗಳನ್ನು ಪರಿಪಾಲಿಸಿದ್ದರಿಂದಲೇ ಇಂದು ಭಾರತ ತಂಡ ಚಾಂಪಿಯನ್ ಆಗಿದೆ.
ಇನ್ನು ಪಂದ್ಯಾವಳಿಯಲ್ಲಿ ಆಡಿದ್ದ 6 ಪಂದ್ಯಗಳಲ್ಲೂ ಭಾರತ ತಂಡ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಭಾರತ ಲೀಗ್ ಹಂತದ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ತಾವು ಬಲಿಷ್ಠ ತಂಡ ಎಂಬುದನ್ನು ಸಾಬೀತುಪಡಿಸಿದ್ದರು.
Comments are closed.