ಕರ್ನಾಟಕ

ಹಾಸ್ಯ ನಟನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Pinterest LinkedIn Tumblr


ಬೆಂಗಳೂರು: “ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ಮಹಿಳಾ ಟೆಕ್ಕಿಯೊಬ್ಬರು ಹಾಸ್ಯ ನಟ ತರಂಗ ವಿಶ್ವನಾಥ್‌ ಸೇರಿ ನಾಲ್ವರ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಉತ್ತರಹಳ್ಳಿ ನಿವಾಸಿ ಹಾಸ್ಯನಟ ತರಂಗ ವಿಶ್ವನಾಥ್‌, ಪಾಪಣ್ಣ ಹಾಗೂ ಪುಟ್ಟಸ್ವಾಮಿ, ಇವರ ಅಳಿಯ ನಾಗೇಶ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಫ್ಟ್ವೇರ್‌ ಕಂಪೆನಿಯಲ್ಲಿ ಟೆಕ್ಕಿಯಾಗಿರುವ ಸಂತ್ರಸ್ತೆಗೆ 10 ವರ್ಷದ ಪುತ್ರಿ ಇದ್ದಾರೆ. 2013-14ರಲ್ಲಿ ಉತ್ತರಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಒಂದರಲ್ಲಿ ವಾಸವಿದ್ದರು.

ಈ ವೇಳೆ ಪಕ್ಕದ ಫ್ಲ್ಯಾಟ್‌ನಲ್ಲಿ ನೆಲೆಸಿದ್ದ ವಿಶ್ವನಾಥ್‌ ಮತ್ತು ಇತರರು ತಮ್ಮನ್ನು ನೋಡಿ ಅಶ್ಲೀಲವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಆದರೂ ಆರೋಪಿಗಳು ನಮಗೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಹೀಗಾಗಿ 2015ರ ಡಿಸೆಂಬರ್‌ನಲ್ಲಿ ಮನೆ ಖಾಲಿ ಮಾಡಿ ಬೇರೆಡೆ, ಅಂದರೆ ಪುಟ್ಟಸ್ವಾಮಿ ಎಂಬುವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದೆ. ಆಗ ಪುಟ್ಟಸ್ವಾಮಿ ಮತ್ತು ಅವರ ಅಳಿಯ ನಾಗೇಶ್‌, ನನ್ನ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದರು. ನಂತರ ಅಲ್ಲಿಂದಲೂ ಮನೆ ಖಾಲಿ ಮಾಡಿದೆ.

ಇದಾದ ಬಳಿಕ ನಾಲ್ಕು ಮಂದಿ ಆರೋಪಿಗಳು ನಾನು ವಾಸವಿದ್ದ ಸ್ಥಳಕ್ಕೆ ಬಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ನಗರ ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಇದೀಗ ಆಯುಕ್ತರ ಸೂಚನೆ ಮೇರೆಗೆ ಸಿ.ಕೆ.ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

-ಉದಯವಾಣಿ

Comments are closed.