ಮನೋರಂಜನೆ

ಋತುಚಕ್ರ ಆದಾಗಲೂ ದೇವರ ಪೂಜೆ ಮಾಡಿದ್ದೆ: ನಟಿ ಶ್ರದ್ಧಾ ಶ್ರೀನಾಥ್‌!

Pinterest LinkedIn Tumblr


ಋತುಚಕ್ರ ಅಥವಾ ಮುಟ್ಟಿನ ಬಗ್ಗೆ ಮಾತನಾಡಲು ಅನೇಕರು ಹಿಂಜರಿಯುತ್ತಾರೆ. ವಿದ್ಯಾವಂತರು ಕೂಡ ಈ ಬಗ್ಗೆ ಮುಚ್ಚುಮರೆ ಮಾಡುವುದುಂಟು. ಇದೊಂದು ಸಹಜ ದೈಹಿಕ ಕ್ರಿಯೆ ಎಂಬುದು ತಿಳಿದಿದ್ದರೂ ಸಹ ಇದರ ಬಗ್ಗೆ ಅನೇಕರಿಗೆ ಅತಿಯಾದ ಮಡಿವಂತಿಕೆ ಇದೆ. ಅಂಥವರ ನಡುವೆ ನಟಿ ಶ್ರದ್ಧಾ ಶ್ರೀನಾಥ್‌ ಒಂದು ಮಹತ್ವದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

‘ಆಗ ನನಗೆ 14 ವರ್ಷ. ಮನೆಯಲ್ಲಿ ದೇವರ ಪೂಜೆಯಲ್ಲಿ ಪಾಲ್ಗೊಂಡಿದ್ದಾಗ ನನಗೆ ಪೀರಿಯಡ್ಸ್‌ ಆಯಿತು. ಜೊತೆಯಲ್ಲಿ ಅಮ್ಮ ಇರಲಿಲ್ಲ. ಹಾಗಾಗಿ ಈ ವಿಚಾರವನ್ನು ಪಕ್ಕದಲ್ಲೇ ಇದ್ದ ನಮ್ಮ ಆಂಟಿಗೆ ಕಸಿವಿಸಿಯಿಂದಲೇ ತಿಳಿಸಿದೆ. ಯಾಕೆಂದರೆ ಆ ಸಮಯದಲ್ಲಿ ನಾನು ಸ್ಯಾನಿಟರಿ ಪ್ಯಾಡ್‌ ಧರಿಸಿರಲಿಲ್ಲ’ ಎಂದು ಹಲವು ವರ್ಷಗಳ ಹಿಂದಿನ ಆ ಘಟನೆಯನ್ನು ಶ್ರದ್ಧಾ ಈಗ ನೆನಪಿಸಿಕೊಂಡಿದ್ದಾರೆ. ನಂತರ ಏನಾಯಿತು?

‘ಪಕ್ಕದಲ್ಲೇ ಇನ್ನೊರ್ವ ಒಳ್ಳೆಯ ಮಹಿಳೆ ಕುಳಿತಿದ್ದರು. ನಾನು ಚಿಂತೆಯಿಂದ ಆಂಟಿಗೆ ಹೇಳಿದ ಮಾತನ್ನು ಅವರು ಕೇಳಿಸಿಕೊಂಡರು. ನನ್ನೆಡೆಗೆ ಒಂದು ಭರವಸೆ ನಗು ಬೀರಿದರು. ಪೂಜೆಯ ಸಂದರ್ಭದಲ್ಲಿ ಋತುಚಕ್ರ ಆಗಿದ್ದಕ್ಕೆ ಪರವಾಗಿಲ್ಲ ಚಿನ್ನ… ದೇವರು ಕ್ಷಮಿಸುತ್ತಾರೆ ಎಂದು ಆ ಮಹಿಳೆ ಹೇಳಿದರು. ಆ ದಿನವೇ ನಾನು ಮಹಿಳಾವಾದಿ ಆದೆ. ಪೀರಿಯಡ್ಸ್‌ ಬಗ್ಗೆ ತಪ್ಪು ಕಲ್ಪನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿದೆ. ಆಗ ನನಗೆ 14ರ ಪ್ರಾಯ’ ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಶ್ರದ್ಧಾ ಶ್ರೀನಾಥ್ ಬರೆದುಕೊಂಡಿದ್ದಾರೆ.

ಈ ವಿಚಾರದ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮೆಂಟ್‌ಗಳ ಮೂಲಕ ಹಲವರು ಸಹಮತ ಸೂಚಿಸಿದ್ದಾರೆ. ‘ನನಗೂ ಇಂಥ ಅನುಭವ ಆಗಿದೆ’ ಎಂದು ಕೆಲವು ಮಹಿಳೆಯರು ಕಾಮೆಂಟ್‌ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮುಕ್ತವಾಗಿ ಚರ್ಚೆ ಆಗುತ್ತಿದೆ. ಇನ್ನೂ ಕೆಲವರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ!

ಕನ್ನಡದ ‘ಯು ಟರ್ನ್‌’ ಚಿತ್ರದ ಮೂಲಕ ಜನಪ್ರಿಯತೆ ಪಡೆದ ಶ್ರದ್ಧಾ ಶ್ರೀನಾಥ್‌, ನಂತರ ತೆಲುಗು-ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಅಲ್ಲಿಯೂ ಒಳ್ಳೊಳ್ಳೆಯ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ‘ವಿಕ್ರಂ ವೇದ’, ‘ಜೆರ್ಸಿ’, ‘ನೇರ್ಕೊಂಡ ಪಾರ್ವೈ’ ಮುಂತಾದ ಹಿಟ್‌ ಸಿನಿಮಾಗಳು ಅವರ ಖಾತೆಯಲ್ಲಿವೆ. ಬಾಲಿವುಡ್‌ಗೂ ಎಂಟ್ರಿ ನೀಡಿ ‘ಮಿಲನ್‌ ಟಾಕೀಸ್‌’ ಸಿನಿಮಾದಲ್ಲಿ ನಟಿಸಿದರು. ಕನ್ನಡದಲ್ಲಿ ಸತೀಶ್‌ ನೀನಾಸಂ ಜೊತೆ ಅವರು ನಟಿಸಿರುವ ‘ಗೋದ್ರಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

Comments are closed.