ಮನೋರಂಜನೆ

ಮತ್ತೊಮ್ಮೆ ಕನ್ನಡಾಭಿಮಾನ ಮೆರೆದ ಅನುಷ್ಕಾ ಶೆಟ್ಟಿ!

Pinterest LinkedIn Tumblr


ನಟಿ ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿ. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಹೆಸರು. ಆದರೆ, ಅವರು ಮೂಲತಃ ಕನ್ನಡತಿ. ಮಂಗಳೂರು ಮೂಲಕ ಅನುಷ್ಕಾ, ಬೇರೆ ಬೇರೆ ಭಾಷಗಳಲ್ಲಿ ಎಷ್ಟೇ ಖ್ಯಾತಿ ಪಡೆದುಕೊಂಡಿದ್ದರೂ, ಕನ್ನಡತನವನ್ನು ಮರೆಯುವುದಿಲ್ಲ. ಆಗಾಗ ಕನ್ನಡದ ಮೇಲಿನ ಅಭಿಮಾನವನ್ನು ತೋರಿಸುತ್ತಲೇ ಇರುತ್ತಾರೆ. ಅಂತೆಯೇ 64ನೇ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಳದಿ, ಕೆಂಪು ಬಣ್ಣದ ಕರ್ನಾಟಕ ನಕ್ಷೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ ಅನುಷ್ಕಾ. ಅದರ ಮೇಲೆ, ‘ಈ ದಿನ ನಮ್ಮ ಶ್ರೀಮಂತ್ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವಲ್ಲಿ ಹೆಮ್ಮೆ ಪಡೋಣ ಮತ್ತು ವರ್ಷವಿಡೀ ಪ್ರತಿಯೊಂದು ಕ್ಷಣವನ್ನು ಹೀಗೆ ಮುಂದುವರಿಸೋಣ. ಪ್ರಪಂಚದಾದ್ಯಂತ ಇರುವ ಎಲ್ಲ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು’ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ. ಬರೀ ಕನ್ನಡ ರಾಜ್ಯೋತ್ಸವಕ್ಕೆ ಮಾತ್ರವಲ್ಲ, ಡಾ. ರಾಜ್‌ಕುಮಾರ್ ಜನ್ಮದಿನದಂದು ಅವರು ಕನ್ನಡದಲ್ಲೇ ವಿಷ್ ಮಾಡುವುದನ್ನು ಮರೆಯುವುದಿಲ್ಲ. ಅಲ್ಲದೆ, ಅವರ ತಾಯಿ ಜನ್ಮದಿನಕ್ಕೆ ಕನ್ನಡದಲ್ಲೇ ವಿಷ್‌ ಮಾಡಿ ಸುದ್ದಿ ಆಗಿದ್ದರು ಅನುಷ್ಕಾ. ಕರ್ನಾಟಕದಲ್ಲಿ ಅವರು ನೆಲೆಸಿಲ್ಲದಿದ್ದರೂ, ಕನ್ನಡದ ಮೇಲಿನ ಅವರ ಪ್ರೀತಿ ಕಂಡು ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು, ಸಂಗೀತ ನಿರ್ದೇಶಕ ಎಸ್‌. ಥಮನ್‌ ಹುಟ್ಟಿ ಬೆಳೆದದ್ದು ಆಂಧ್ರ ಪ್ರದೇಶದಲ್ಲಿ. ಅವರ ಮಾತೃಭಾಷೆ ತೆಲುಗು. ಆದರೂ, ತಮ್ಮ ಟ್ವಿಟರ್ ಖಾತೆಯಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ರಾಜ್ಯೋತ್ಸವದ ಶುಭಾಶಯ ಅವರು ತಿಳಿಸಿದ್ದಾರೆ. ‘ಸಮಸ್ತ ಕನ್ನಡ ಕುಲಕೋಟಿಗೆ ಕನ್ನಡ ಹಬ್ಬದ ಶುಭಾಶಯಗಳು’ ಎಂದು ಅವರು ಬರೆದುಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಸಂಗೀತ ನಿರ್ದೇಶಕರಾಗಿ ಥಮನ್‌ ತೆಲುಗು ಚಿತ್ರರಂಗದ ಮೂಲಕ ಕೆಲಸ ಆರಂಭಿಸಿದರು. ನಂತರ ಅವರು ತೆಲುಗು-ತಮಿಳಿನ ಅನೇಕ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಪವರ್’ ಸಿನಿಮಾದ ಮುಖೇನ ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು. ಆನಂತರ ‘ಚಕ್ರವ್ಯೂಹ’, ‘ಆರೆಂಜ್‌’, ‘ಜೂಮ್‌’, ‘ಜಾಗ್ವಾರ್’ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಈಗ ಅಪ್ಪು ನಟನೆಯ ‘ಯುವರತ್ನ’ಕ್ಕೂ ಅವರೇ ಸಂಗೀತ ನಿರ್ದೇಶಕರು.

Comments are closed.