ಮುಂಬೈ : ಈ ಬಾರಿಯ ಮಳೆಗೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರವಾಹ ಏರ್ಪಟ್ಟು ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ಇದರಿಂದ ಸಾವಿರಾರು ಜನ ಮನೆ ಕಳೆದುಕೊಂಡಿದ್ದಾರೆ. ಲಕ್ಷಾಂತರ ಎಕರೆ ಜಮೀನು ಕೊಚ್ಚಿಹೋಗಿದೆ. ಈ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ಮಹಾರಾಷ್ಟ್ರದ ಪ್ರವಾಹಪೀಡಿತರಿಗಾಗಿ ಸಹಾಯಹಸ್ತ ಚಾಚಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿ ಕೃಷ್ಣಾ ನದಿಗೆ ನೀರು ಬಿಟ್ಟಿದ್ದರಿಂದ ಉತ್ತರ ಕರ್ನಾಟಕದ ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ ಭಾಗದಲ್ಲಿ ಪ್ರವಾಹ ಉಂಟಾಗಿತ್ತು ಜನರು ಪರದಾಡುವಂತಾಗಿತ್ತು.
ಬಾಲಿವುಡ್ ನಟ ಆಮೀರ್ ಖಾನ್ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ.ಗಳನ್ನು ನೀಡುವ ಮೂಲಕ ನೆರೆಪೀಡಿತರಿಗೆ ಸಹಾಯಹಸ್ತ ಚಾಚಿದ್ದಾರೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೂಡ 11 ಲಕ್ಷ ನೀಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ್ದು, ಇಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಸುಮಾರು 54 ಜನರು ಸಾವನ್ನಪ್ಪಿದ್ದರು. ನಾಲ್ಕು ಜನರು ನಾಪತ್ತೆಯಾಗಿದ್ದರು. ಸಾಂಗ್ಲಿ ಜಿಲ್ಲೆಯಲ್ಲಿ 26, ಕೊಲ್ಹಾಪುರದಲ್ಲಿ 10, ಸತಾರಾ 8, ಪುಣೆ 9 ಜನ ಸಾವನ್ನಪ್ಪಿದ್ದರು. ಈ ಹಿಂದೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಮಹಾರಾಷ್ಟ್ರದ ನೆರೆ ಸಂತ್ರಸ್ತರಿಗೆ 51 ಲಕ್ಷ ರೂ. ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ಬಾಲಿವುಡ್ ನಟ ನಾನಾ ಪಾಟೇಕರ್ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 500 ಮನೆಗಳನ್ನು ಕಟ್ಟಿಕೊಡುವ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ನಟ ರಿತೇಶ್ ದೇಶ್ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದರು. ಸಿಎಂ ದೇವೇಂದ್ರ ಫಡ್ನವಿಸ್ ತಮ್ಮ ಟ್ವಿಟ್ಟರಿನಲ್ಲಿ, ‘ಮಹಾರಾಷ್ಟ್ರ ಪ್ರವಾಹಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ಜೆನಿಲಿಯಾ ಹಾಗೂ ರಿತೇಶ್ಗೆ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದರು.
Comments are closed.