ಮನೋರಂಜನೆ

ಚಂದನವನಕ್ಕೆ ಐಟಿ ಅಧಿಕಾರಿಗಳ ದಾಳಿಯ ಕಾರಣ ಬಯಲು!

Pinterest LinkedIn Tumblr


ಬೆಂಗಳೂರು: ‘ದಿ ವಿಲನ್‌’, ‘ಕೆಜಿಎಫ್‌’ ಸೇರಿದಂತೆ ಇತ್ತೀಚಿನ ಹಲವು ಕನ್ನಡ ಚಿತ್ರಗಳಲ್ಲಿ ಹೂಡಿಕೆಯಾಗುತ್ತಿರುವ ಅಪಾರ ಪ್ರಮಾಣದ ಹಣ ಮತ್ತು ಹಣ ಗಳಿಕೆ ಬಗ್ಗೆ ಆಯಾ ಚಿತ್ರಗಳ ನಿರ್ಮಾಪಕರ ಹೇಳಿಕೆಗಳು, ಮಾಧ್ಯಮಗಳಲ್ಲಿನ ವರದಿಗಳನ್ನು ಆಧರಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕನ್ನಡದ ಬಿಗ್‌ ಬಜೆಟ್‌ ಚಿತ್ರಗಳ ನಿರ್ಮಾಣ ಹಾಗೂ ಬಿಡುಗಡೆ ನಂತರ ಅವುಗಳು ಹತ್ತಾರು, ನೂರಾರು ಕೋಟಿ ರು.ಗಳ ಹಣ ಗಳಿಸುತ್ತಿರುವ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ನಾಯಕ ನಟರು ಹಾಗೂ ನಿರ್ಮಾಪಕರ ಆದಾಯ ತೆರಿಗೆ ಸಲ್ಲಿಕೆ ಕುರಿತ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ, ಎಲ್ಲೋ ಹೆಚ್ಚು ಕಡಮೆಯಾಗುತ್ತಿರಬಹುದು. ಕೇಂದ್ರ ಸರ್ಕಾರದ ಹಣಕಾಸು ಸಂಬಂಧಿ ಕಠಿಣ ನಿಯಮಗಳ ನಂತರ ಚಿತ್ರರಂಗದಲ್ಲಿ ಬೇನಾಮಿ ಹಣ ಹೂಡಿಕೆ ಹೆಚ್ಚಾಗಿರಬಹುದು ಎಂಬ ಅನುಮಾನ ಬಂದಿದೆ. ಹೀಗಾಗಿ, ದಾಳಿ ನಡೆಸಿ ವಂಚನೆ ಪತ್ತೆ ಹಚ್ಚುವ ಪ್ರಯತ್ನ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಏಕಾಏಕಿ ಕನ್ನಡ ಚಿತ್ರರಂಗದಲ್ಲಿ ಬಿಗ್‌ ಬಜೆಟ್‌ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ಕನ್ನಡದಲ್ಲೂ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಹೂಡಿಕೆ ಮಾಡಿ ಚಿತ್ರ ಮಾಡಬಹುದು ಎಂಬುದರ ಊಹೆಯೂ ಇರಲಿಲ್ಲ. ನೆರೆಯ ತಮಿಳು, ತೆಲುಗು ಭಾಷೆಯ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದ ಮಾರುಕಟ್ಟೆಸೀಮಿತವಾದದ್ದು. ಹೀಗಾಗಿ, ಇಲ್ಲಿ ಬಿಗ್‌ ಬಜೆಟ್‌ ಚಿತ್ರಗಳನ್ನು ನಿರ್ಮಿಸಿ ಲಾಭ ಗಳಿಸುವುದು ಕಷ್ಟಎಂಬ ಮಾತೇ ಚಾಲ್ತಿಯಲ್ಲಿತ್ತು.

ಆದರೆ, ಅದನ್ನು ಇತ್ತೀಚಿನ ಕೆಲವು ಚಿತ್ರಗಳು ಸುಳ್ಳಾಗಿಸಿ ಭರ್ಜರಿ ಜಯಭೇರಿ ಗಳಿಸಿವೆ. ದೊಡ್ಡ ಪ್ರಮಾಣದ ಹಣ ಹೂಡಿಕೆಯಾಗುವುದರ ಜೊತೆಗೆ ಅಪಾರ ಪ್ರಮಾಣದ ಲಾಭವನ್ನೂ ಗಳಿಸುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ದಾಳಿಗಿಳಿದಿದ್ದಾರೆ ಎಂದು ತಿಳಿದು ಬಂದಿದೆ.

Comments are closed.