ಸದ್ಯಕ್ಕಂತೂ ಬಾಲಿವುಡ್ನಲ್ಲಿ ಕಂಗನಾ ರಣಾವತ್ ಕಿರಿಕ್ ಮಾಡುವುದನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ. ಇಷ್ಟು ದಿನ ಹೃತಿಕ್ ರೋಷನ್ ಜತೆ ಕೋಳಿ ಜಗಳ ಮಾಡಿಕೊಂಡಿದ್ದ ಅವರು ಮತ್ತೊಂದು ಹೊಸ ಜಟಾಪಟಿ ಶುರುವಿಟ್ಟುಕೊಂಡಿದ್ದಾರೆ. ಮೂಲಗಳ ಪ್ರಕಾರ, ಈಗ ಕಂಗನಾ ವಿರುದ್ಧ ಶಾಹಿದ್ ಕಪೂರ್ ಮುನಿಸಿಕೊಂಡಿದ್ದಾರೆ.
ಹಾಗೆ ನೋಡಿದರೆ ಕಂಗನಾ ಮತ್ತು ಶಾಹಿದ್ ನಡುವೆ ಇದುವರೆಗೆ ಯಾವುದೇ ವೈಮನಸ್ಸು ಉಂಟಾಗಿರಲಿಲ್ಲ. ಸಿನಿಮಾ ಸಲುವಾಗಿಯಾಗಲಿ, ಖಾಸಗಿ ವಿಚಾರಕ್ಕಾಗಲಿ ಇವರಿಬ್ಬರು ಕಿತ್ತಾಡಿಕೊಂಡಿರಲಿಲ್ಲ. ಪ್ರಸ್ತುತ ‘ರಂಗೂನ್’ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದು, ಶೂಟಿಂಗ್ ವೇಳೆ ಪರಸ್ಪರ ಮುಖ ಗಂಟುಹಾಕಿಕೊಂಡಿದ್ದಾರಂತೆ. ಅದಕ್ಕೆಲ್ಲ ಕಂಗನಾನೇ ನೇರ ಕಾರಣ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಚಿತ್ರೀಕರಣ ನಡೆಯುವಾಗ ಅವರು ಅನಗತ್ಯವಾಗಿ ಮೂಗು ತೂರಿಸುತ್ತಾರಂತೆ. ಇದು ನಿರ್ದೇಶಕ ವಿಶಾಲ್ ಭಾರದ್ವಜ್ ಅವರಲ್ಲೂ ಬೇಸರ ಮೂಡಿಸಿದೆ. ಅದೇ ಕಾರಣಕ್ಕಾಗಿ ಚಿತ್ರದ ಶೂಟಿಂಗ್ ತುಂಬ ವಿಳಂಬ ಆಗುತ್ತಿದೆ ಎಂಬ ಸುದ್ದಿ ಹಬ್ಬಿಸಿದ್ದಾರೆ ಗಾಸಿಪ್ಪ್ರಿಯರು. ಆದರೆ ಇದನ್ನೆಲ್ಲ ಒಪ್ಪಿಕೊಳ್ಳಲು ಕಂಗನಾ ಸಿದ್ಧರಿಲ್ಲ. ‘ಈ ಎಲ್ಲ ಗಾಳಿಸುದ್ದಿಯನ್ನು ನಾನು ಕೇಳಿಸಿಕೊಳ್ಳುತ್ತಿದ್ದೇನೆ. ಪ್ರಚಾರಕ್ಕಾಗಿ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹಬ್ಬಿಸಿದರೆ ನಾನು ಸುಮ್ಮನಿರುವವಳಲ್ಲ. ಮಿತಿ ಮೀರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ತಿರುಗಿಬೀಳುತ್ತೇನೆ. ಮುಂದಿನ ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಶೂಟಿಂಗ್ ಸೆಟ್ನಲ್ಲಿ ಎಲ್ಲರೂ ಎಂಜಾಯ್ ಮಾಡುತ್ತಿರುವಾಗ ಕಂಗನಾ ಮಾತ್ರ ಸುಮ್ಮನೆ ಕುಳಿತಿರುತ್ತಾರೆ ಎಂಬ ಆರೋಪ ಕೂಡ ಇದೆ. ಇದು ಸಹನಟರ ಬಗ್ಗೆ ನಿಮಗಿರುವ ಅಸಮಾಧಾನದ ಸಂಕೇತ ಅಲ್ಲವೇ ಎಂದು ಪ್ರಶ್ನಿಸಿದರೆ, ‘ನಾನು ಚಿತ್ರೀಕರಣಕ್ಕೆ ಹೋಗುವುದು ಪಾರ್ಟಿ ಮಾಡುವುದಕ್ಕೆ ಅಲ್ಲ’ ಎಂದು ಕಂಗನಾ ಗುಡುಗಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಶಾಹಿದ್ ಕಪೂರ್ ಮತ್ತು ನಿರ್ದೇಶಕ ವಿಶಾಲ್ ಭಾರದ್ವಜ್ ಅಧಿಕೃತವಾಗಿ ಆರೋಪಿಸದ ಕಾರಣ, ಅಂತೆಕಂತೆಗಳ ರೂಪದಲ್ಲಿಯೇ ಈ ಸುದ್ದಿ ಹರಿದಾಡುತ್ತಿದೆ.
Comments are closed.