ಮೊನ್ನೆ ತಾನೇ ಐಶ್ವರ್ಯಾ ರೈ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಅಭಿಮಾನಿಗಳು ಒಟ್ಟಾಗಿ ಸಂಭ್ರಮಿಸಿದ್ದರು. ‘ಪದ್ಮಾವತಿ’ ಚಿತ್ರದಲ್ಲಿ ಈ ಇಬ್ಬರೂ ನಟಿಯರು ಒಟ್ಟಾಗಿ ಅಭಿನಯಿಸುತ್ತಾರೆ ಎಂಬುದು ಅದಕ್ಕೆ ಕಾರಣವಾಗಿತ್ತು. ಆದರೆ ಇದೀಗ ಕೇಳಿಬರುತ್ತಿರುವ ಹೊಸ ಸುದ್ದಿಯೊಂದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಬರೆದಿರುವ ಚಿತ್ರಕಥೆಯಲ್ಲಿ ಐಶ್ ಪಾತ್ರಕ್ಕೆ ಅವಕಾಶವೇ ಇಲ್ಲವಂತೆ!
‘ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ಐಶ್ ಮತ್ತು ಬನ್ಸಾಲಿ ಭೇಟಿಯಾಗಿದ್ದರು. ಆದರೆ ಅವರು ‘ಪದ್ಮಾವತಿ’ ಬಗ್ಗೆ ಯಾವುದೇ ಚರ್ಚೆ ನಡೆಸಲಿಲ್ಲ. ಅಷ್ಟಕ್ಕೂ ಈ ಚಿತ್ರದಲ್ಲಿ ರಾಣಿ ಪದ್ಮಾವತಿ (ದೀಪಿಕಾ), ರಾಣಾ ರಾವಲ್ ರತನ್ ಸಿಂಗ್ (ಶಾಹಿದ್ ಕಪೂರ್), ಅಲ್ಲಾವುದ್ದೀನ್ ಖಿಲ್ಜಿ (ರಣವೀರ್ ಸಿಂಗ್) ಮತ್ತು ಆತನ ಪತ್ನಿ (ಆದಿತಿ ರಾವ್ ಹೈದರಿ) ಹೊರತು ಪಡಿಸಿದರೆ ಬೇರೆ ಯಾವುದೇ ಹೆಚ್ಚಿನ ಪಾತ್ರಗಳಿಗೆ ಜಾಗವೇ ಇಲ್ಲ. ಹಾಗಿದ್ದಮೇಲೆ ಈ ಚಿತ್ರದಲ್ಲಿ ಐಶ್ ನಟಿಸುತ್ತಾರೆ ಎಂಬುದೆಲ್ಲ ಶುದ್ಧ ಸುಳ್ಳು’ ಎಂಬ ಮಾತುಗಳು ಬನ್ಸಾಲಿಯ ಆಪ್ತ ವಲಯದಿಂದಲೇ ಕೇಳಿಬರುತ್ತಿವೆ.
ಐಶ್ವರ್ಯಾ ಮತ್ತು ಬನ್ಸಾಲಿ ನಡುವೆ ಉತ್ತಮ ಒಡನಾಟ ಇದೆ. ‘ಹಮ್ ದಿಲ್ ದೇ ಚುಕೆ ಸನಮ್, ‘ದೇವದಾಸ್’, ‘ಗುಜಾರಿಶ್‘ ಮುಂತಾದ ಚಿತ್ರಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ತಮ್ಮಿಬ್ಬರ ನಡುವೆ ಬಹುವರ್ಷಗಳ ಗೆಳೆತನವಿದೆ ಎಂಬ ಒಂದೇ ಕಾರಣಕ್ಕಾಗಿ ಚಿತ್ರಕಥೆಯಲ್ಲಿಯೇ ಇಲ್ಲದ ಪಾತ್ರವನ್ನು ಸೃಷ್ಟಿಸುವಂತಹ ಅಗತ್ಯ ಬನ್ಸಾಲಿ ಅವರಿಗಿಲ್ಲ ಎಂಬ ಸ್ಪಷ್ಟನೆ ಕೂಡ ಚಿತ್ರತಂಡದ ಕೆಲವರದ್ದು. ಇಷ್ಟೆಲ್ಲ ಸುದ್ದಿ ಹರಿದಾಡುತ್ತಿದ್ದರೂ ಅತ್ತ ಐಶ್ ಆಗಲಿ, ಇತ್ತ ಬನ್ಸಾಲಿ ಆಗಲಿ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.
Comments are closed.