ಸ್ಯಾಂಡಲ್ವುಡ್ನಲ್ಲಿ ದೆವ್ವಗಳು ಹೆಚ್ಚಾಗಿವೆ. ಅರ್ಥಾತ್, ಹಾರರ್ ಚಿತ್ರಗಳ ಸಂಖ್ಯೆ ಏರಿಕೆಯಾಗಿದೆ. ಯಾವ ದೆವ್ವಕ್ಕೆ ಪ್ರೇಕ್ಷಕನನ್ನು ಹೆದರಿಸುವ ತಾಕತ್ತು ಇದೆಯೋ ಆ ದೆವ್ವಕ್ಕೆ ಗೆಲುವು ಗ್ಯಾರಂಟಿ. ಎರಡು ವಾರಗಳ ಹಿಂದೆ ಚಿತ್ರಮಂದಿರಕ್ಕೆ ಬಂದ ‘ಚಂದ್ರಿಕಾ’ಗೆ ಅಂಥ ಗೆಲುವು ಸಿಕ್ಕಿದೆಯಂತೆ. ಹಾಗಂತ ಚಿತ್ರತಂಡವೇ ಹೇಳಿಕೊಳ್ಳುತ್ತಿದೆ. ನೋಡುಗನ ಮುಖದಲ್ಲಿ ಭಯ ಮೂಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಿರ್ವಪಕರ ಮುಖದಲ್ಲಿ ನಗುವಂತೂ ಮೂಡಿದೆ!
ಒಂದು ಮಟ್ಟಕ್ಕೆ ಜನರನ್ನು ಆಕರ್ಷಿಸಿದ್ದ ‘ಚಂದ್ರಿಕಾ’ಗೆ ಥಿಯೇಟರ್ ಸಮಸ್ಯೆ ಎದುರಾಗಿತ್ತು. ಕನ್ನಡದ ಆನೆ (ಐರಾವತ) ಮತ್ತು ತಮಿಳಿನ ಹುಲಿ (ಪುಲಿ) ದಾಳಿಗೆ ಬಲಿಯಾಗಿ ಇನ್ನೇನು ಚಿತ್ರಮಂದಿರದಿಂದ ‘ಚಂದ್ರಿಕಾ’ ಕಾಲು ಕೀಳಬೇಕು ಎಂಬಂಥ ಪರಿಸ್ಥಿತಿ ಎದುರಾಗಿದ್ದೂ ನಿಜ. ಆ ಕ್ಷಣಕ್ಕೆ ಬೇಸರಿಸಿಕೊಂಡ ನಾಯಕ ಜಯರಾಮ್ ಕಾರ್ತಿಕ್ ಫೇಸ್ಬುಕ್ನಲ್ಲಿ ಅಸಮಾಧಾನ ಕಾರಿಕೊಂಡಿದ್ದರು. ಆದರೀಗ ‘ನಾವು ಗೆದ್ದಿದ್ದೇವೆ’ ಎಂದು ಖುಷಿ ಹಂಚಿಕೊಳ್ಳುತ್ತಿದ್ದಾರೆ. ‘ಬಿಗ್ ಬಜೆಟ್ ಸಿನಿಮಾಗಳು ಬಂದಾಗ ನಮ್ಮಂಥ ಚಿಕ್ಕ ಚಿತ್ರಗಳಿಗೆ ತೊಂದರೆಯಾಗೋದು ಸಹಜ. ಹಾಗಾಗಿ ಅಭಿಮಾನಿಗಳ ಜತೆ ಫೇಸ್ಬುಕ್ನಲ್ಲಿ ಬೇಸರ ತೋಡಿಕೊಂಡಿದ್ದು ನಿಜ. ಅದನ್ನೇ ದೊಡ್ಡದು ಮಾಡುವ ಅಗತ್ಯವಿಲ್ಲ’ ಎನ್ನುತ್ತಾರವರು.
ಥಿಯೇಟರ್ ಸಮಸ್ಯೆ ನಡುವೆಯೂ ಗೆಲುವು ಹೇಗೆ ಸಾಧ್ಯ ಎಂದು ಕೇಳಿದರೆ, ದ್ವಿಭಾಷಾ ಸೂತ್ರ ಬಿಚ್ಚಿಡುತ್ತಾರೆ ನಿರ್ದೇಶಕ ಯೋಗೀಶ್. ‘ಒಂದೇ ಬಜೆಟ್ನಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣ ಮಾಡಿ, ಏಕಕಾಲಕ್ಕೆ ಬಿಡುಗಡೆ ಮಾಡಿದ್ದರಿಂದ ಒಂದು ಕಡೆ ಸ್ವಲ್ಪ ಡಲ್ ಎನಿಸಿದರೂ, ಮತ್ತೊಂದು ಕಡೆ ಚೆನ್ನಾಗಿ ಕಲೆಕ್ಷನ್ ಆಗಿದೆ’ ಎನ್ನುತ್ತಾರೆ ನಿರ್ದೇಶಕರು. ಆಂಧ್ರದಲ್ಲಿ ‘ಚಂದ್ರಿಕಾ’ಗೆ ಚಿತ್ರಮಂದಿರ ಸಮಸ್ಯೆಯೇ ಎದುರಾಗಲಿಲ್ಲವಂತೆ. ಇದೀಗ ಕರ್ನಾಟಕದಲ್ಲಿ ಮತ್ತಷ್ಟು ಥಿಯೇಟರ್ಗಳು ಸಿಕ್ಕಿದ್ದು, ‘ನಾವು ಸೇಫ್ ಆಗಿದ್ದೇವೆ’ ಎನ್ನುತ್ತಿದೆ ಚಿತ್ರತಂಡ. ಅದೆಲ್ಲ ಸರಿ, ಕಲೆಕ್ಷನ್ ಎಷ್ಟಾಯ್ತು? ‘ನೀವು ಕೇಳಬಾರದು, ನಾವು ಹೇಳಬಾರದು…’ ಎಂಬರ್ಥದಲ್ಲಿ ಮಾತು ಮುಗಿಸುತ್ತಾರೆ ನಿರ್ದೇಶಕರು!