ಬೆಂಗಳೂರು: ಶುಕ್ರವಾರ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಸುದ್ದಿಗೆ ಗ್ರಾಸವಾಗಿರುವ ಕನ್ನಡದ ಖ್ಯಾತ ನಟ ಸುದೀಪ್ ಇಂದು ಟ್ವಿಟ್ಟರ್ ನಲ್ಲಿ ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಸಂದೇಹಗಳಿಗೆ ಉತ್ತರ ಕೊಡಲು ಪ್ರಯತ್ನಿಸಿದ್ದಾರೆ.
” ನನ್ನ ಜೀವನದ ಬೆಳವಣಿಗೆ ಬಗ್ಗೆ ಅನೇಕ ಚಾನೆಲ್ ಗಳು ಮತ್ತು ಪತ್ರಿಕೆಗಳ ಜೊತೆ ಮಾತನಾಡಿದ್ದೇನೆ. ನಾನು ಈ ವಿಷಯವನ್ನು ಮುಚ್ಚಿಡಲು ಅಥವಾ ಪರಿಸ್ಥಿತಿಯಿಂದ ಓಡಿಹೋಗಲು ಇಚ್ಛಿಸುವುದಿಲ್ಲ. ನನ್ನ ಬಗ್ಗೆ ಇರುವ ಕಾಳಜಿ ಮತ್ತು ನಿಮಗಿರುವ ಕುತೂಹಲದ ಬಗ್ಗೆ ನನಗೆ ಅರ್ಥವಾಗುತ್ತದೆ. ನನ್ನ ಕುಟುಂಬಕ್ಕೆ ನಿಮ್ಮ ಪ್ರೀತಿಯ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ, ನನ್ನ ಇಂದಿನ ಈ ಸ್ಥಿತಿಗೆ ಯಾರು ಹೊಣೆಗಾರರೋ ಅವರಿಗೂ ನನ್ನ ಧನ್ಯವಾದಗಳು, ಅವರಿಗೆ ಒಳ್ಳೆಯದಾಗಲಿ, ಸಂತೋಷವಾಗಿರಿ, ನನಗೆ ಆಶೀರ್ವಾದ ಮಾಡಿ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
2001ರಲ್ಲಿ ಸುದೀಪ್ ಕೇರಳ ಮೂಲದ ನಾಯರ್ ಕುಟುಂಬದ ಪ್ರಿಯಾ ರಾಧಕೃಷ್ಣನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರಿಗೂ 11 ವರ್ಷದ ಮಗಳು ಸಾನ್ವಿ ಇದ್ದು, ಆಕೆಯನ್ನು ಪತ್ನಿ ಪ್ರಿಯ ಸುಪರ್ದಿಗೆ ನೀಡಲು ಸುದೀಪ್ ಒಪ್ಪಿದ್ದಾರೆ. ಅಲ್ಲದೇ ಇಬ್ಬರ ಜೀವನಾಂಶಕ್ಕೆ 19 ಕೋಟಿ ನೀಡಲು ಒಪ್ಪಿದ್ದಾರೆನ್ನಲಾಗಿದೆ.