ಬೆಂಗಳೂರು, ಜು.27: `ಉಪ್ಪಿ-2` ಚಿತ್ರದ ಹಾಡೊಂದರ ವಿವಾದದಿಂದ ಬೇಸತ್ತ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಫೇಸ್ ಬುಕ್ನಿಂದ ಹೊರಬಂದಿದ್ದಾರೆ.
ಉಪ್ಪಿ-2 ಸಾಂಗ್ನ ಸಾಲು ಮತ್ತು ಅದಕ್ಕೆ ಜಗ್ಗೇಶ್ ಹಾಕಿದ ಕಾಮೆಂಟ್, ಉಪೇಂದ್ರ ಅಭಿಮಾನಿಗಳಿಂದ ಫೇಸ್ ಬುಕ್ನಲ್ಲಿ ಬಂದ ರಿಯಾಕ್ಷನ್ ಇವುಗಳಿಂದ ಬೇಸತ್ತು ಫೇಸ್ ಬುಕ್ನಿಂದ ಹೊರಬರುತ್ತಿದ್ದೇನೆ. ಅಭಿಮಾನಿಗಳಿಗೆ ತೆರೆಮೇಲೆ ಮಾತ್ರ ಸಿಗುತ್ತೇನೆ ಎಂದು ಸ್ವತಃ ಜಗ್ಗೇಶ್ ತಮ್ಮ ನಿರ್ಧಾರಕ್ಕೆ ಕಾರಣವನ್ನೂ ತಿಳಿಸಿದ್ದಾರೆ.
ಉಪ್ಪಿ-2 ಚಿತ್ರದ ಹಾಡಿನ ಸಾಲೊಂದರ ಬಗ್ಗೆ ನಾನು ಆಡಿದ ಒಂದು ಮಾತಿಗೆ ಸಹಸ್ರಾರು ಅರ್ಥ ಕಲ್ಪಿಸಿ ಶತಮಾನದ ಅನುಭವದ ದಿಕ್ಕು ತಪ್ಪಿಸಿ ಮಡಿಯಿಂದ ಇದ್ದ ನನ್ನ ಫೇಸ್ ಬುಕ್ ಪೇಜ್ ಮೇಲೆ ಕೆಲವು ಅವಿವೇಕಿಗಳು ಮಲಮೂತ್ರ ವಿಸರ್ಜನೆ ಮಾಡಿಬಿಟ್ಟರು. ಅಂತಹವರಿಗೆ ನನ್ನದೊಂದು ಪ್ರಶ್ನೆ. ನನ್ನನ್ನು ಸೇರಿದಂತೆ ಎಲ್ಲರನ್ನೂ ಹುಟ್ಟಿಸಿದ್ದು ನಮ್ಮ ಹೆತ್ತವರು. ಯಾವ ನಟನೂ ಅಲ್ಲ. ಕಲಾವಿದ ಕಲೆಯ ರಾಯಭಾರಿಯೇ ಹೊರತು ನಮ್ಮನ್ನು ಹುಟ್ಟಿಸಿದ ಅಪ್ಪ-ಅಮ್ಮ ಅಲ್ಲ.
ಒಂದು ಅನಿಸಿಕೆಯನ್ನು ವಿಷಯಾಂತರ ಮಾಡಿ ತೆಗೆದುಕೊಂಡ ತಿರುವು ಅರಗಿಸಲು ಕಷ್ಟವಾಗಿದೆ. ವಿಷಯಾಂತರ 6 ಕೋಟಿ ಜನರಿಂದಲೂ ಆಗಿದ್ದರೆ ಮೌನವಾಗಿರುತ್ತಿದ್ದೆ. ಆದರೆ ಇದರ ಸಂಖ್ಯೆ ಸಾವಿರ ದಾಟಿಲ್ಲ. ಇದಕ್ಕೆ ಏನನ್ನಬೇಕೋ ಗೊತ್ತಿಲ್ಲ ಎಂದಿದ್ದಾರೆ.