ಬೆಂಗಳೂರು: ಕನ್ನಡ ನಟಿ ದೀಪಾ ಸನ್ನಿಧಿ ಕನ್ನಡ ಚಿತ್ರೋದ್ಯಮದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಫಲರಾಗಿದ್ದರು ಅವರಿಗೆ ಚಿತ್ರೋದ್ಯಮದ ಮನೆಮಾತಾಗಲು ಸಾಧ್ಯವಾಗಲೇ ಇಲ್ಲ. ಕನ್ನಡ ಚಿತ್ರೋದ್ಯಮದ ಕುರಿತು ಹೇಳುವುದಾದರೆ ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಸದಾ ಕಾಲಕ್ಕೂ ನಿಜವೇನೋ. ದೀಪಾ ಸನ್ನಿಧಿ ಆ ಯಶಸ್ಸು ಮತ್ತು ಕೀರ್ತಿಯನ್ನು ಪಕ್ಕದ ರಾಜ್ಯದ ತಮಿಳುನಾಡಿನಲ್ಲಿ ಕಂಡುಕೊಳ್ಳುತ್ತಿದ್ದಾರೆ ಎಂಬುದೇ ಸುದ್ದಿ!
ದರ್ಶನ್ ಜೊತೆ ಸಾರಥಿ ಸಿನೆಮಾದಲ್ಲಿ ಪಾದರ್ಪಣೆ ಮಾಡಿದ ದೀಪಾ, ಪುನೀತ್ ಜೊತೆ ಪರಮಾತ್ಮದಲ್ಲೂ ನಟಿಸಿ ಸೈ ಎನಿಸಿಕೊಂಡವರು. ಆದರೆ ಈಗ ದೀಪಾ ತಮಿಳು ಚಿತ್ರೋದ್ಯಮದಲ್ಲಿ ತಮ್ಮ ಸ್ಥಾನ ಭದ್ರಗೊಳಿಸಿಕೊಳ್ಳುತ್ತಿದ್ದಾರೆ. ಇವರ ನಟನೆಯ ತಮಿಳಿನ ಎರಡನೇ ಸಿನೆಮಾದ ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಸಮಯದಲ್ಲಿ ಬೆಂಗಳೂರಿಗೆ ಭೇಟಿಕೊಟ್ಟ ದೀಪಾ “‘ಯಾಚನ್’ ನಲ್ಲಿ ನಾನು ಆರ್ಯ ಎದುರು ಕಾಣಿಸಿಕೊಂಡಿದ್ದೇನೆ. ಆಗಸ್ಟ್ ಬಿಡುಗಡೆಗೆ ಕಾಯುತ್ತಿದ್ದೇನೆ” ಎಂದಿದ್ದಾರೆ.
ಇವರ ತಮಿಳು ಚಿತ್ರದ ಪಾದಾರ್ಪಣೆಯಾಗಿದ್ದು ‘ಎನಕ್ಕುಲ್ ಒರುವನ್’ ಸಿನೆಮಾದಿಂದ. ಲೂಸಿಯಾ ರಿಮೇಕ್ ಆದ ಈ ಸಿನೆಮಾದಲ್ಲಿ ಸಿದ್ಧಾರ್ತ್ ಜೊತೆ ನಟಿಸಿದ್ದರು. ಸ್ಯಾಂಡಲ್ ವುಡ್ ನಿಂದ ದೂರ ಸರಿದಿರುವ ವರದಿಗಳನ್ನು ತಳ್ಳಿ ಹಾಕುವ ಸನ್ನಿಧಿ “ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಇಲ್ಲೇ ಇರುತ್ತೇನೆ. ಕನ್ನಡಿಗಳಾಗಿ ಕನ್ನಡ ಸಿನೆಮಾಗಳೆಂದರೆ ಪ್ರಾಣ. ಆದರೆ ಸಿಕ್ಕ ಪಾತ್ರಗಳಲ್ಲೆಲ್ಲಾ ನಟಿಸುವಳು ನಾನಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತ ಕನ್ನಡ ಸಿನೆಮಾಗಳಲ್ಲಿ ನಟಿಸುತ್ತೇನೆ” ಎಂದಿದ್ದಾರೆ.
ದೀಪಾ ಅವರ ಕಡೆಯ ಕನ್ನಡ ಸಿನೆಮಾ ‘ಎಂದೆಂದು ನಿನಗಾಗಿ’ ಹೆಚ್ಚಿನ ಶಬ್ದ ಮಾಡಲಿಲ್ಲ. ಹಾಗೆಯೇ ಅವರು ನಟಿಸಬೇಕಿದ್ದ ‘ಲವ್ ಚುರುಮುರಿ’ ಕಾರಣಾಂತರಗಳಿಂದ ಸ್ಥಗಿತಗೊಂಡಿದೆ.
ಬರವಣಿಗೆ ನನ್ನ ಪ್ರೀತಿ ಎನ್ನುವ ದೀಪಾ “ನಾನು ಸಿನೆಮಾಗಳನ್ನು ಹವ್ಯಾಸದಂತೆ ತೆಗೆದುಕೊಂಡಿದ್ದೇನೆ. ನನಗೆ ಮುಂದೆ ಓದುವ ಆಸೆ ಇದೆ ಹಾಗೆಯೇ ಸೃಜನಶೀಲ ಬರವಣಿಗೆಯನ್ನು ಮುಂದುವರೆಸಬೇಕೆಂದಿದ್ದೇನೆ” ಎನ್ನುತ್ತಾರೆ ದೀಪಾ.