ಕೆಲವು ಕ್ಷೇತ್ರಗಳಲ್ಲಿ ಕೆಲಸಕ್ಕೆ ಬಾರದ ಆಯೋಗ್ಯರು ಎಂದು ಕರೆಸಿಕೊಂಡವರು ಇನ್ನೊಂದು ಕ್ಷೇತ್ರದಲ್ಲಿ ಹೇಗೋ ಮಿಂಚಿಬಿಡುತ್ತಾರೆ. ಕೆಲವೆಡೆ ಕೀರ್ತಿಯ ಉತ್ತುಂಗ ಏರಿ ಬಿದ್ದವರು ಇನ್ನೊಂದೆಡೆ ಬದುಕಿಕೊಳ್ಳಲು ನೋಡುತ್ತಾರೆ. ಮಾಜಿ ಕ್ರಿಕೆಟಿಗ ಶ್ರೀಶಾಂತ್ ಇವರೆಡರಲ್ಲಿ ಯಾವ ಕೆಟಗರಿಗೆ ಸೇರುತ್ತಾರೆ ಅಂತ ನೀವೇ ಹೇಳಬೇಕು.
ಯಾಕೆಂದರೆ ಈತ 2013ರಲ್ಲಿ ಐಪಿಎಲ್ ಪಂದ್ಯಗಳಲ್ಲಿ ನಡೆದ ಫಿಕ್ಸಿಂಗ್ನಲ್ಲಿ ಪಾಲ್ಗೊಂಡ ಆರೋಪಕ್ಕೊಳಗಾಗಿ, ಕ್ರಿಕೆಟ್ನಿಂದ ನಿಷೇಧಕ್ಕೆ ತುತ್ತಾಗಿದ್ದರು. ಅಲ್ಲಿಂದಾಚೆಗೆ ಹಿಂದಿ ಚಿತ್ರರಂಗದಲ್ಲಿ ತಳವೂರಲು ಅವರ ಪ್ರಯತ್ನ ನಡೆದೆ ಇತ್ತು. ಈಗ ಪೂಜಾ ಭಟ್ ಅವರ ‘ಕ್ಯಾಬರೆ’ ಚಿತ್ರದಲ್ಲಿ ಈತ ಹೀರೋ ಆಗುತ್ತಿರುವ ಸುದ್ದಿಯಿದೆ. ಕ್ಯಾಬರೆ ಶ್ರೀಶಾಂತ್ನದೇ ಇರಬೇಕು. ಯಾಕೆಂದರೆ ಫೀಲ್ಡ್ನಲ್ಲೇ ಶರ್ಟ್ ಬಿಚ್ಚಿ ಬಿಸಾಕಿ ಕುಣಿದ ಇತಿಹಾಸ ಇದೆಯಲ್ಲ.
ಶ್ರೀಶಾಂತ್ರ ಇನ್ನೊಂದು ಚಿತ್ರವೂ ದಕ್ಷಿಣದ ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಬರಲಿದೆಯಂತೆ. ಅದು ಆಮೇಲೆ 14 ಭಾರತೀಯ ಭಾಷೆಗಳಿಗೆ ಡಬ್ ಆಗಲಿದೆಯಂತೆ. ಇದನ್ನು ನಿರ್ಮಾಪಕ ಸನಾ ಯಾದಿರೆಡ್ಡಿ ಅವರೇ ಸ್ಪಷ್ಟಪಡಿಸಿದ್ದಾರೆ.
ಶ್ರೀಶಾಂತ್ ಒಳ್ಳೆ ಕ್ರಿಕೆಟರ್ ಮಾತ್ರವಲ್ಲ, ಒಳ್ಳೆ ಡ್ಯಾನ್ಸರ್, ಆಕ್ಟರ್ ಕೂಡ ಹೌದು ಅನ್ನುವುದು ಅವರ ಸರ್ಟಿಫಿಕೇಟು. ಕ್ಯಾಬರೆ ಚಿತ್ರದ ಕತೆಯೇ ಕ್ರಿಕೆಟಿಗೆ ಸಂಬಂಧಿಸಿದ್ದಂತೆ. ತನ್ನ ಕುಟುಂಬದ ಹಿನ್ನೆಲೆಯಲ್ಲಿ ನಟನೆ ಇದೆ. ಹಾಗಾಗಿ ನಾನು ಟ್ರೈ ಮಾಡ್ತಿದ್ದೇನೆ. ಕ್ರಿಕೆಟ್ ಬಿಟ್ರೇನಾಯ್ತು ನಟನೆ ಬಿಡಲ್ಲ. ಲೈಫು ದೊಡ್ಡದು, ಒಂದಲ್ಲ ಒಂದು ಕಡೆ ಹರಿಯುತ್ತಲೇ ಇರುತ್ತೆ ಅನ್ನೊಂದು ಶ್ರೀಶಾಂತ್ ಫಿಲಾಸಫಿ.