ರವಿತೇಜಾ, ಶೃತಿ ಹಾಸನ್ ಅಭಿನಯದ ತೆಲುಗಿನ ಯಶಸ್ವಿ ಚಿತ್ರ ‘ಬಲುಪು’ ವನ್ನು ಕನ್ನಡಕ್ಕೆ ತಾವು ರಿಮೇಕ್ ಮಾಡುತ್ತಿರುವುದಾಗಿ ಹಬ್ಬಿರುವ ಸುದ್ದಿಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
‘ಬಲುಪು’ ಚಿತ್ರವನ್ನು ತಾವು ಕನ್ನಡಕ್ಕೆ ರಿಮೇಕ್ ಮಾಡುತ್ತಿಲ್ಲ. ಅಲ್ಲದೇ ಈ ಕುರಿತು ಯಾವ ಮಾತುಕತೆಯೂ ನಡೆದಿಲ್ಲವೆಂದು ಹೇಳುವ ಮೂಲಕ ಈಗ ಹಬ್ಬಿರುವ ಗಾಳಿ ಸುದ್ದಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಈ ರೀತಿಯ ವದಂತಿ ಹಬ್ಬಿಸುತ್ತಿರುವವರಿಗೆ ಈ ಸ್ಪಷ್ಟನೆ ಸಾಕಾಗಬಹುದೆಂದು ಹೇಳುವ ಮೂಲಕ ಸುದ್ದಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಅಲ್ಲದೇ ಕಿಚ್ಚ ಸುದೀಪ್ ಇತ್ತೀಚೆಗೆ ತಮ್ಮ ಕೈಗೆ ಗಾಯ ಮಾಡಿಕೊಂಡಿದ್ದರೆಂದು ಹೇಳಲಾಗಿದ್ದು, ವಿಷಯ ತಿಳಿದು ಟ್ವೀಟ್ ಮಾಡುವ ಮೂಲಕ ಶೀಘ್ರ ಗುಣಮುಖವಾಗಲೆಂದು ಹೇಳಿದವರಿಗೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ‘ರನ್ನ’ ಚಿತ್ರಕ್ಕೆ ತೋರಿದ ಪ್ರೀತಿಗೂ ತಾವು ಅಭಾರಿ ಎಂದು ಅವರು ಹೇಳಿದ್ದಾರೆ.
ನಂದಕಿಶೋರ್ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ‘ರನ್ನ’ ಚಿತ್ರ ಜೂನ್ 4 ರಂದು ಬಿಡುಗಡೆಗೊಂಡಿದ್ದು, ಇಂದಿಗೂ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೊದಲ ವಾರವೇ ಈ ಚಿತ್ರ ’10 ಕೋಟಿ ಕ್ಲಬ್’ ಸೇರಿದ್ದು, ಇದೇ ವೇಗದಲ್ಲಿ ಮುಂದುವರಿದರೆ ಗಳಿಕೆಯಲ್ಲಿ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಬಹುದೆಂಬ ಮಾತುಗಳು ಕೇಳಿ ಬರುತ್ತಿವೆ.