ಕನ್ನಡ ಚಿತ್ರರಂಗದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರ ಕ್ರಿಕೆಟ್ ಹುಚ್ಚು ಯಾವ ಮಟ್ಟಿಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಸುದೀಪ್, ಕರ್ನಾಟಕ ಪ್ರಿಮಿಯರ್ ಲೀಗ್ ನಲ್ಲಿ ತಂಡವೊಂದನ್ನು ಖರೀದಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಐಪಿಎಲ್ ಮಾದರಿಯಲ್ಲೇ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆರಂಭಿಸಿರುವ ಕೆಪಿಎಲ್ ಟ್ವೆಂಟಿ 20 ಟೂರ್ನಿಗೆ ಇದೀಗ ಸುದೀಪ್ ಸಜ್ಜಾಗುತ್ತಿದ್ದು ಹೊಸ ತಂಡವನ್ನು ಖರೀದಿಸಿ ಅದಕ್ಕೆ ಶಿವಮೊಗ್ಗ ಜಿಲ್ಲೆಯ ಹೆಸರಿಡುವ ಚಿಂತನೆ ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಕರ್ನಾಟಕ ಪ್ರಿಮಿಯರ್ ಲೀಗ್ ಭರ್ಜರಿಯಾಗಿ ಆರಂಭಗೊಂಡರೂ ಸಹ ಮೂರು ವರ್ಷ ಟೂರ್ನಿ ನಡೆದಿರಲಿಲ್ಲ. ಕಳೆದ ವರ್ಷ ದಿವಂಗತ ಶ್ರೀಕಂಠದತ್ತ ಒಡೆಯರ್ ಸ್ಮರಣಾರ್ಥ ಒಡೆಯರ್ ಕೆಪಿಎಲ್ ಕಪ್ ಕೆಎಸ್ ಸಿಎ ಆಯೋಜಿಸಿತ್ತು. ಆದರೆ ಮಲ್ನಾಡ್ ಗ್ಲಾಡಿಯೇಟರ್ಸ್ ತಂಡ ಕಳೆದ ಕೆಪಿಎಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಶಿವಮೊಗ್ಗ ಹಾಗೂ ಮಲೆನಾಡು ಭಾಗ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಸುದೀಪ್ ಅವರು ತಂಡ ಕಟ್ಟುತ್ತಿದ್ದಾರೆ ಎನ್ನಲಾಗಿದ್ದು ಇದಕ್ಕಾಗಿ ಹೂಡಿಕೆ ದಾರರ ನಿರೀಕ್ಷೆಯಲ್ಲಿದ್ದಾರಂತೆ.
ಒಟ್ಟಿನಲ್ಲಿ ಕೆಪಿಎಲ್ ಹೊಸ ತಂಡಗಳ ಟೆಂಡರ್, ಹರಾಜು ಬಗ್ಗೆ ವಿವರಗಳು ಪ್ರಕಟವಾದರೆ ಸುದೀಪ್ ಅವರ ಹೊಸ ತಂಡದ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬೀಳುವುದಂತೂ ಸತ್ಯ.