ಬೆಂಗಳೂರು: ಮೇ.17ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧದ ಪಂದ್ಯದ ನಡುವೆ ತನ್ನ ಗರ್ಲ್ಫ್ರೆಂಡ್ ಅನುಷ್ಕಾ ಶರ್ಮಾ ಜತೆ ಮಾತನಾಡಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಗೆ ಬಿಸಿಸಿಐ ತಾಕೀತು ನೀಡಿದೆ.
ಮ್ಯಾಚ್ ನಡೆಯುತ್ತಿರುವ ವೇಳೆ ಕ್ರಿಕೆಟಿಗರು ಯಾರೊಂದಿಗೂ ಮಾತನಾಡುವಂತಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಐಪಿ ವಿಭಾಗಕ್ಕೂ ಕ್ರಿಕೆಟಿಗರು ಕುಳಿತುಕೊಳ್ಳುವ ವಿಭಾಗಕ್ಕೂ ಅಷ್ಟೇನೂ ಅಂತರವಿಲ್ಲ. ಆದ್ದರಿಂದ ಅವರಿಬ್ಬರೂ ಮಾತನಾಡಿರಬಹುದು. ನಾವು ಈಗಾಗಲೇ ಅನಧಿಕೃತವಾಗಿ ಕೊಹ್ಲಿಗೆ ತಾಕೀತು ನೀಡಿದ್ದೇವೆ. ಮುಂದೆ ಹಾಗೆ ಮಾಡದಂತೆ ಹೇಳಿದ್ದೇವೆ. ಒಂದು ವೇಳೆ ಎಸಿಎಸ್ಯು ಅಧಿಕೃತರು ನಮಗೆ ಮಾಹಿತಿ ನೀಡಿದರೆ ಕೊಹ್ಲಿಗೆ ನಾವು ಅಧಿಕೃತವಾಗಿ ತಾಕೀತು ನೀಡುತ್ತೇವೆ ಎಂದು ಐಪಿಎಲ್ ಚೇರ್ಮೆನ್ ರಾಜೀವ್ ಶುಕ್ಲಾ ಹೇಳಿರುವುದಾಗಿ ಸುದ್ದಿ ಮಾಧ್ಯಮವೊಂದು ಉಲ್ಲೇಖಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆಯಿಂದಾಗಿ ಪಂದ್ಯ ಅಲ್ಪ ಹೊತ್ತು ಸ್ಥಗಿತಗೊಂಡಾಗ ಕೊಹ್ಲಿ ಮತ್ತು ಅನುಷ್ಕಾ ಗುಸುಗುಸು ಮಾತನಾಡಿಕೊಂಡಿದ್ದರು. ಹೀಗೆಲ್ಲ ಮಾತನಾಡುವುದನ್ನು ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ಎಸಿಎಸ್ಯು) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧಿಸಿದೆ.
ಐಪಿಎಲ್ ಪಂದ್ಯದ ವೇಳೆ ಎಸಿಎಸ್ಯು ಪ್ರತಿಯೊಬ್ಬ ಕ್ರಿಕೆಟಿಗನ ಚಲನವಲನದ ಮೇಲೆ ನಿಗಾ ಇಟ್ಟಿರುತ್ತದೆ.