ಮುಂಬೈ: ಬಾಂಬ್ ಹೈಕೋರ್ಟ್ ತೀರ್ಪಿನಿಂದಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ನಿರಾಳವಾಗಿರಬಹುದು. ಆದರೆ ಸೆಪ್ಟೆಂಬರ್ 28, 2002ರಂದು ಅವರ ಅಜಾಗರೂಕತೆಯಿಂದಾದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬ ಇನ್ನೂ ಕಣ್ಣೀರಲ್ಲಿ ಕೈತೋಳೆಯುತ್ತಿದೆ.
ಸಲ್ಮಾನ್ ಖಾನ್ ಅವರ ನಿರ್ಲಕ್ಷಿತ ಚಾಲನೆಗೆ ಬಲಿಯಾದ ನುರುಲ್ಲಾಹ್ ಅವರ ಪುತ್ರ ಫಿರೋಝ್ ಶೇಖ್ ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ತಂದೆಯ ಅಕಾಲಿಕ ಮರಣದಿಂದ ಕಂಗಾಲಾದ ತಾಯಿಯ ನೆರವಿಗೆ ನಿಲ್ಲುತ್ತಾನೆ. 25 ವರ್ಷದ ಫಿರೋಝ್ಗೆ ಈಗ ಮದುವೆಯೂ ಆಗಿದೆ.
ಬಾಂಬೆ ಹೈಕೋರ್ಟ್ ಸೆಷೆನ್ಸ್ ಕೋರ್ಟ್ ತೀರ್ಪನ್ನು ಅಮಾನತುಗೊಳಿಸಿ, ಸಲ್ಮಾನ್ ಖಾನ್ಗೆ ಜಾಮೀನು ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಫಿರೋಝ್, ‘ನಾನು ಅವರನ್ನು ಕ್ಷಮಿಸಬಹುದು. ಆದರೆ ಆತನಿಂದ ನಮ್ಮ ಜೀವನಕ್ಕೆ ನಾಶವಾಗಿದೆ’ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಉದ್ದೇಶಪೂರ್ವಕ ಅಲ್ಲ ಎಂದಿರುವ ಫಿರೋಝ್, ತಮ್ಮ ತಂದೆ ಹಾಗೂ ಸಲ್ಮಾನ್ ಖಾನ್ ಅವರಿಗೆ ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ್ದಾರೆ.
ಈ ಮಧ್ಯೆ ಸಲ್ಮಾಖ್ ಅವರಿಗೆ ಶಿಕ್ಷೆ ವಿಧಿಸಲು ಕೋರ್ಟ್ 12 ವರ್ಷ ಸಮಯ ತೆಗೆದುಕೊಂಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಫಿರೋಝ್ ಅವರ ತಾಯಿ ಬೇಗಂ ಜಾಹನ್ ಅವರು, ಆತನಿಗೆ ನೀಡುವ ಶಿಕ್ಷೆ ಇತರರಿಗೆ ಮಾದರಿಯಾಗಬೇಕು ಎಂದಿದ್ದಾರೆ.
ಘಟನೆಯ ಬಳಿಕ ಸರ್ಕಾರ 10 ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಘೋಷಿಸಿತ್ತು. ಆದರೆ ಇದುವರೆಗೂ ತಮಗೆ ಪರಿಹಾರ ಸಿಕ್ಕಿಲ್ಲ ಎಂದು ಜಾಹನ್ ತಿಳಿಸಿದ್ದಾರೆ.
-ಕನ್ನಡಪ್ರಭ