ಬೆಂಗಳೂರು: ‘ನಮ್ಮ ಮಗಳು ವೈಭವಿಗೆ ಸಚಿವ ಅಂಬರೀಷ್ ಅವರು ಮುತ್ತು ನೀಡಿರುವ ಛಾಯಾಚಿತ್ರವನ್ನು ರಾಜಕೀಯವಾಗಿ ಬಳಸಿಕೊಂಡು ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ’ ಎಂದು ನಟ ಜೈ ಜಗದೀಶ್ ಅಳಲು ತೋಡಿಕೊಂಡಿದರು.
‘ಅಂಬರೀಷ್ ನಮ್ಮ ಕುಟುಂಬದ ಆಪ್ತರಲ್ಲೊಬ್ಬರು. ವೈಭವಿಯನ್ನು ಮಗಳಂತೆ ಕಾಣುತ್ತಾರೆ. ಆದರೆ, ಮಾಧ್ಯಮಗಳಲ್ಲಿ ಛಾಯಾಚಿತ್ರಗಳನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ’ ಎಂದು ನೊಂದು ನುಡಿದರು. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾಲ್ಕು ತಿಂಗಳ ಹಿಂದೆ ಅಂಬರೀಷ್ ಅವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನನ್ನ ಮಗಳು ವೈಭವಿ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡಿದ್ದಳು.
ಬಳಿಕ ಆ ಛಾಯಾಚಿತ್ರಗಳನ್ನು ಫೇಸ್ಬುಕ್ನಲ್ಲಿ ಹಾಕಿದ್ದಳು. ಆದರೆ, ಅಂಬರೀಷ್ ಅವರ ವಿರೋಧಿಗಳು ಆ ಚಿತ್ರಗಳನ್ನು ಮಾಧ್ಯಮಗಳಿಗೆ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ. ಆ ಛಾಯಾಚಿತ್ರವನ್ನು ಮಾಧ್ಯಮಗಳಿಗೆ ನೀಡಿದವರು ಯಾರು ಎಂದು ಗೊತ್ತಾಗಿದೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈಭವಿ ಅವರ ತಾಯಿ ವಿಜಯಲಕ್ಷ್ಮಿ ಸಿಂಗ್ ಮಾತನಾಡಿ, ‘ಮಾಧ್ಯಮಗಳಲ್ಲಿ ನಮ್ಮ ಮಗಳ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ. ಇದರಿಂದಾಗಿ ಅವಳು ಸಾರ್ವಜನಿಕವಾಗಿ, ಕಾಲೇಜಿನಲ್ಲಿ ಅವಮಾನ ಅನುಭವಿಸುವಂತಾಗಿದೆ’ ಎಂದು ಕಣ್ಣೀರಿಟ್ಟರು.
‘ಅಂಬರೀಷ್ ಅವರ ಮನೆಯಲ್ಲಿ ಭಾಗವಹಿಸಿದ್ದ ನೆನಪಿಗಾಗಿ ಆ ಛಾಯಾಚಿತ್ರವನ್ನು ತೆಗೆಸಿಕೊಂಡಿದ್ದೆ.
ನನ್ನ ತಂದೆಯೇ ಅದನ್ನು ತೆಗೆದಿದ್ದಾರೆ. ಅದೇ ರೀತಿಯ ಛಾಯಾಚಿತ್ರಗಳನ್ನು ನನ್ನ ತಂದೆ, ಮಾವ ರಾಜೇಂದ್ರಸಿಂಗ್ ಬಾಬು ಅವರೊಂದಿಗೂ ತೆಗೆಸಿಕೊಂಡಿದ್ದೇನೆ’ ಎನ್ನುತ್ತ ವೈಭವಿ ಭಾವೋದ್ವೇಗದಿಂದ ಅತ್ತರು.